
ತೊಕ್ಕೊಟ್ಟುವಿನಲ್ಲಿ ಯುವಕನಿಗೆ ಮಾರಕಾಯುಧದಿಂದ ದಾಳಿ
Friday, May 2, 2025
ಉಳ್ಳಾಲ: ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧದಿಂದ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತೊಕ್ಕೊಟ್ಟು ಒಳಪೇಟೆ ಬಳಿ ನಡೆದಿದೆ.
ಅಳೇಕಲ ನಿವಾಸಿ ಫೈಝಲ್ ಗಾಯಗೊಂಡಿರುವ ವ್ಯಕ್ತಿ.
ಫೈಝಲ್ ಅವರು ಗುರುವಾರ ಮಧ್ಯರಾತ್ರಿ ವೇಳೆ ಒಂಭತ್ತುಕೆರೆಯ ಪತ್ನಿ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ತನ್ನ ಸ್ಕೂಟರಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್ ಒಂದರಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ತಲ್ವಾರು ಬೀಸಿದ್ದಾರೆನ್ನಲಾಗಿದೆ.ಇದೇ ವೇಳೆ ಮತ್ತೊಂದು ಬೈಕಲ್ಲಿ ಮತ್ತಿಬ್ಬರು ಯುವಕರು ಮಾರಕಾಯುಧಗಳೊಂದಿಗೆ ಬಂದಿದ್ದು, ಎರಡು ಬೈಕಲ್ಲಿ ನಾಲ್ವರು ಮಂಗಳೂರಿನ ಕಡೆ ಪರಾರಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಫೈಝಲ್ ಅವರ ಬೆನ್ನಿಗೆ ಗಾಯವಾಗಿದ್ದು ಈ ಬಗ್ಗೆ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸರು ಘಟನೆ ನಡೆದಿದೆ ಎನ್ನಲಾದ ತೊಕ್ಕೊಟ್ಟುವಿನ ಮಾಯಾ ಬಾರ್ ಬಳಿಯ ಸಿಸಿಟಿವಿ ಫೂಟೇಜ್ ಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.