
ಧರಾಶಾಹಿಯಾದ ಉಕ್ಕಿನ ಸೇತುವೆಯ ತಡೆಬೇಲಿ!
ಬಂಟ್ವಾಳ: ಶತಮಾನ ಪೂರೈಸಿದ ಪಾಣೆಮಂಗಳೂರಿನ ಹಳೇಯ ಉಕ್ಕಿನ ಸೇತುವೆ ಈಗ ಮತ್ತೊಂದು ಸುದ್ದಿಯಾಗಿದೆ.
ಪ್ರಾಣಕ್ಕೆ ಕುತ್ತು ತರುವ ಸ್ಥಿತಿಯಲ್ಲಿದ್ದ ಕಬ್ಬಿಣದ ತಡೆಬೇಲಿಗೆ ವಾಹನವೊಂದು ಸಿಲುಕಿಕೊಂಡ ಪ್ರಸಂಗ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ರಾತ್ರಿ ಮೀನು ಸಾಗಾಟದ ಪಿಕಪ್ ವಾಹನ ಈ ಕಮಾನಿಗೆ ಗುದ್ದಿರುವ ರಭಸಕ್ಕೆ ತಡೆಬೇಲಿ ಧರಾಶಾಹಿಯಾಗಿದೆ. ಅದೃಷ್ಟವಶಾತ್ ಇಲ್ಲಿ ಯಾರು ಕೂಡ ಇಲ್ಲದಿದ್ದರಿಂದ ಪ್ರಾಣಾಪಾಯ ತಪ್ಪಿದ್ದಲ್ಲದೆ ಗೂಡಿನಬಳಿ ಭಾಗದ ತಡೆಬೇಲಿ ಸದ್ಯ ತೆರವಾದಂತಾಗಿದೆ.
ಈ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರೂ ಪಾಣೆಮಂಗಳೂರಿಗೆ ಸರಕು ಹೊತ್ತು ತರುತ್ತಿದ್ದ ಲಾರಿಗಳ ಸಂಚಾರ ನಿರಾತಂಕವಾಗಿ ಮುಂದುವರಿದಿತ್ತು. ಸೇತುವೆಯಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತುಕೊಂಡ ಬಂಟ್ವಾಳ ಪುರಸಭೆ ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ತಡೆಬೇಲಿ ನಿರ್ಮಿಸಿ ಘನವಾಹನಗಳ ಸಂಚಾರವನ್ನು ನಿಷೇಧಿಸಿತು. ಆದರೆ ಕೆಲ ವಾಹನ ಚಾಲಕರು ತಡೆಬೇಲಿಯಲ್ಲೂ ಘನವಾಹನಗಳನ್ನು ನುಗ್ಗಿಸಿದ ಕಾರಣ ತಡೆಬೇಲಿ ಹಿಗ್ಗಿ ಸೇತುವೆಯ ರಕ್ಷಣೆಗಿದ್ದ ಬೇಲಿ ಕಮಾನಿನಂತಾಗಿ ನಿಷ್ಪ್ರಯೋಜಕವಾಗಿ ಬುಡಸಮೇತ ಕಿತ್ತು ಬಂದು ಅಪಾಯಕಾರಿಯಾಗಿ ವಾಲಿ ನಿಂತಿತ್ತು. ಇದೀಗ ಪಿಕಪ್ ತಡೆಬೇಲಿಯ ಕಂಬಕ್ಕೆ ಬಡಿದ ಪರಿಣಾಮ ಕಿತ್ತು ಅಪಾಯದ ಸ್ತಿತಿಯಲ್ಲಿದ್ದ ತಡೆಬೇಲಿ ನೆಲಕ್ಕುರಳಿದೆ.
ತಡೆಬೇಲಿ ನೆಲದಿಂದ ಕಿತ್ತು ಹೋಗಿ ಪ್ರಾಣಕ್ಕೆ ಕುತ್ತು ಬರುವ ಸ್ಥಿತಿಯಲ್ಲಿದ್ದರೂ, ತಾಲೂಕಾಡಳಿತವಾಗಲಿ, ಪುರಸಭೆಯಾಗಲಿ ಇದನ್ನು ಸರಿಪಡಿಸುವಂತ ಕಾರ್ಯಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿತ್ತು. ಪರಿಣಾಮ ತಡೆಬೇಲಿ ಧರಾಶಾಯಿಯಾಗಿದೆ. ಅದೃಷ್ಟವಶಾತ್ ಅಪಾಯವು ತಪ್ಪಿದೆ.
ಪಾಣೆಮಂಗಳೂರಿನ ಹಳೇ ಸೇತುವೆ ತಡೆಬೇಲಿಗೆ ಪಿಕಪ್ ಢಿಕ್ಕಿಯಾದ ವೀಡಿಯೋ ಚಿತ್ರೀಕರಣಗೊಳಿಸದಂತೆ ಸಲಹೆ ನೀಡುತ್ತಿರುವ ಮತ್ತು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅಗಬಹುದಾದ ತೊಂದರೆಯ ಬಗ್ಗೆ ವಾಯ್ಸ್ ಕೇಳಿಬಂದಿದೆ. ಅದಾಗಿಯೂ ಈ ವೀಡಿಯೋ ಮಾತ್ರ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಟ್ರಾಫಿಕ್ ಠಾಣೆಯಲ್ಲಿ ಯಾವುದೇ ದುಇರು ದಾಖಲಾಗಿಲ್ಲ, ಧಾರಾಶಾಹಿಯಾದ ತಡೆಬೇಲಿಯ ನಷ್ಟವನ್ನು ಯಾರು ತುಂಬಿಸುವುದು ಎಂಬ ಪ್ರಶ್ನೆ ಎದ್ದಿದೆ.