
ಶೈಕ್ಷಣಿಕ ಗ್ರಾಮೀಣ ಶಿಬಿರ ಸಮಾಜದಲ್ಲಿ ಒಳ್ಳೆಯ ನಾಯಕನನ್ನು ಬೆಳೆಸುತ್ತದೆ: ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೋ ಫಿಲೋಮಿನಾ ಎಂಎಸ್ಡಬ್ಲ್ಯೂ ಶೈಕ್ಷಣಿಕ ಗ್ರಾಮೀಣ ಶಿಬಿರದ ಸಮಾರೋಪದಲ್ಲಿ ಹೇಳಿಕೆ
ಕನಕ ಮಜಲು: ಶೈಕ್ಷಣಿಕ ಗ್ರಾಮೀಣ ಶಿಬಿರವು ಸಮಾಜದಲ್ಲಿ ಒಳ್ಳೆಯ ನಾಯಕನನ್ನು ಬೆಳೆಸುವುದರ ಜೊತೆಗೆ ಮಾನವ ಸಂಬಂಧಗಳನ್ನು ಒಂದುಗೂಡಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರಾದ ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೋ ಹೇಳಿದರು.
ಅವರು ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಿಂದ ನಡೆಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ಮುಗೇರು, ಮಾಣಿ, ಮಜಲು ಇಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಗ್ರಾಮೀಣ ಶಿಬಿರ 2025ರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅಲ್ಲದೆ ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅತ್ಯಮೂಲ್ಯವಾಗುತ್ತದೆ. ಅವರು ಆ ಗ್ರಾಮದ ಜನರನ್ನು ಹಾಗೂ ಆ ಶಾಲೆಯ ಅಭಿವೃದ್ಧಿ ಸಮಿತಿಯನ್ನು ಪ್ರಶಂಸಿ, ಮಕ್ಕಳು ಸಮಾಜದಲ್ಲಿ ಹೇಗೆ ಬಾಳಬೇಕೆಂಬ ಬಗ್ಗೆ ಪ್ರೇರಣೆಯ ಮಾತುಗಳನ್ನು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪ್ರೌಢಶಾಲಾ ಶಿಕ್ಷಕ ನಾಗಪ್ಪ ಬೊಮ್ಮೆಟ್ಟಿ ಮಾತನಾಡಿ, ಗ್ರಾಮೀಣ ಶಿಬಿರವು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಅವರು ನಮ್ಮ ಕಾಲೇಜಿನ ಶಿಸ್ತು ಹಾಗು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆನಂದ ಮಾಸ್ಟರ್ ‘ಮಂಕುತಿಮ್ಮ ಕಗ್ಗವನ್ನು ಹೇಳಿ, ಇದರ ಮಹತ್ವವನ್ನು ಈಗಿನ ಯುವ ಸಮಾಜವು ಅರಿತು ಬಾಳಬೇಕು, ಇಂತಹ ಅವಕಾಶಗಳು ವಿದ್ಯಾರ್ಥಿಗಳಿಗೆ ಗ್ರಾಮೀಣ ಶಿಬಿರವು ಒದಗಿಸಿ ಕೊಡುತ್ತದೆ’ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಪ್ರಮುಖರಾದ ದಿವಾಕರ ಕಾಳಪ್ಪಜ್ಜನ ಮನೆ, ಶಾರದಾ ಉಗ್ಗಮಲೆ, ಶ್ರೀಧರ ಕುತ್ಯಾಲ, ಸಾವಿತ್ರಿ, ನಾರಾಯಣ ಬೊಮ್ಮೆಟ್ಟಿ, ಗಾಯತ್ರಿ ಕೆ., ರತಿ ಅವರು ಶಿಬಿರದ ಯಶಸ್ಸಿಗೆ ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತಪಡಿಸಿದರು.
ಶಿಕ್ಷಕಿ ಶುಭ ಪಿ.ಜಿ., ಧನುಶ್ರೀ ಪಲಾತಡ್ಕ (ಪೋಷಕರು), ಇಂದೇಶ್ ಕೊರಂಬರಡ್ಕ (ಹಿರಿಯ ವಿದ್ಯಾರ್ಥಿ), ಸ್ನೇಹ ರೋಸ್ ಜೇಕಾಬ್ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಶಾಲಾ ವಿದ್ಯಾರ್ಥಿಗಳಿಗೆ, ಸ್ಪರ್ಧಾವಿಜೇತರಿಗೆ ಬಹುಮಾನ ನೀಡಿದರು.
ಶಿಬಿರಾಧಿಕಾರಿಯಾದ ಪ್ರತಿಭಾ ಶಿಬಿರದ ವರದಿಯನ್ನು ಮಂಡಿಸಿದರು. ಉಪನ್ಯಾಸಕ ಶೀತಲ್ ಕುಮಾರ್ ಸ್ವಾಗತಿಸಿ, ಸಂಯೋಜಕಿ ಶ್ರೀಮಣಿ ವಂದಿಸಿದರು. ಗನ್ಯ ಪ್ರಾರ್ಥಿಸಿ, ವೈಷ್ಣವಿ ಮತ್ತು ತೇಜಶ್ವಿನಿ ನಿರೂಪಿಸಿದರು.