
ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ-66: ಹೆದ್ದಾರಿ ಗುಂಡಿಗೆ ಬಿದ್ದು ಸತ್ತವರಿಗೆ ಪರಿಹಾರ ನೀಡಿ, ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ: ಡಿ.ವೈ.ಎಫ್.ಐ
Tuesday, June 10, 2025
ಮಂಗಳೂರು: ಮಂಗಳೂರಿನ ನಂತೂರು ಜಂಕ್ಷನ್ ನಿಂದ ಸುರತ್ಕಲ್ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹದಗೆಟ್ಟಿದ್ದು ಹೆದ್ದಾರಿಯಲ್ಲಿ ಸೃಷ್ಟಿ ಆಗಿರುವ ಗುಂಡಿಗಳು ಮರಣ ಗುಂಡಿಗಳಾಗಿ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣವಾಗುತ್ತಿದೆ. ಕೆಲವೆಡೆ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗುಂಡಿಗಳು ಸಾವನ್ನು ಆಹ್ವಾನಿಸುತ್ತಿದೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದೆ ದ್ವಿಚಕ್ರ ವಾಹನ ಸವಾರರು ಸಾವಿಗೀಡಾಗುತ್ತಿದ್ದಾರೆ ಜೂ.9 ರಂದು ರಾತ್ರಿ ಹೆದ್ದಾರಿ ಪ್ರಾಧಿಕಾರವು ಪಣಂಬೂರು ಬಳಿ ರಸ್ತೆ ಅಪಘಾತದಲ್ಲಿ ಜನತಾಕಾಲನಿ ನಿವಾಸಿ ಅಶ್ರಫ್ ಸಾವಿಗೀಡಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಕೃತಕ ಹೊಂಡ ಸೃಷ್ಟಿ ಆಗಿರುವ ಗುಂಡಿಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಡಿವೈಎಫ್ಐ ಆರೋಪಿಸಿದೆ.
ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ನಡೆದಿರುವ ಅಪಘಾತಗಳಿಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ಹೆದ್ದಾರಿ ಇಲಾಖೆಯವರ ಬೇಜವಾಬ್ದಾರಿತನದಿಂದ ಅಶ್ರಫ್ ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ ಅವರ ಕುಟುಂಬ ಅನಾಥವಾಗಿದೆ ಕುಟುಂಬಕ್ಕೆ ಆಧಾರವಾಗಿದ್ದ ಅಶ್ರಫ್ ಸಾವಿನಿಂದ ಪತ್ನಿ ಮತ್ತು ನಾಲ್ಕು ಮಕ್ಕಳಿಗೆ ಗರಿಷ್ಠ ಪರಿಹಾರ ನೀಡಬೇಕು ಮತ್ತು ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯದಿಂದ ಸಂಭವಿಸಿದ ಎಲ್ಲಾ ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಜೂನ್ 11ರಂದು ಪ್ರತಿಭಟನೆ:
ಹೆದ್ದಾರಿ ಇಲಾಖೆಯವರ ನಿರ್ಲಕ್ಷ್ಯತನ ಮತ್ತು ಜನಪ್ರತಿನಿದಿನಗಳ ಬೇಜವಾಬ್ದಾರಿತನ ಖಂಡಿಸಿ, ಹೆದ್ದಾರಿ ಗುಂಡಿ ಮುಚ್ಚಲು ವಿಫಲರಾಗಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ, ಹೆದ್ದಾರಿ ಅಪಘಾತದಲ್ಲಿ ಮೃತಪಟ್ಟ ಅಶ್ರಫ್ ಜನತಾ ಕಾಲನಿ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಒತ್ತಾಯಿಸಿ ಜೂನ್ 11 ಬುಧವಾರ ಸಂಜೆ 5ಗಂಟೆಗೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸುರತ್ಕಲ್ ಜಂಕ್ಷನ್ ಬಳಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೋರಾಟ ಸಮಿತಿ ಸಂಚಾಲಕ ಬಿ.ಕೆ. ಇಮ್ತಿಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.