
ಕೆಂಪೇಗೌಡರ ಚಿಂತನೆಗಳನ್ನು ಯುವ ಜನತೆ ಅನುಸರಿಸಲು ಕರೆ: ಐವನ್ ಡಿಸೋಜಾ
Friday, June 27, 2025
ಮಂಗಳೂರು: ನಾಡಪ್ರಭು ಕೆಂಪೇಗೌಡರ ಅಂದಿನ ದೂರದೃಷ್ಟಿಯ ಆಡಳಿತವು ಆಧುನಿಕ ಬೆಂಗಳೂರನ್ನು ವಿಶ್ವಮಾನ್ಯಕ್ಕೆ ತಲುಪಿಸಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸಹಕಾರದೊಂದಿಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿದರು.
ಕೆಂಪೇಗೌಡರ ಯೋಚನಾಬದ್ಧ ಆಡಳಿತದಿಂದಾಗಿ ಬೆಂಗಳೂರಿನಲ್ಲಿ ನೂರಾರು ಕೆರೆಗಳು ನಿರ್ಮಾಣಗೊಂಡು, ರಾಜಧಾನಿಯ ಪರಿಸರ ಇಂದು ಸಮತೋಲನಗೊಂಡಿದೆ. ನಗರ ಪ್ರವೇಶಿಸುವ ಹೆದ್ದಾರಿಗಳನ್ನು ಸುವ್ಯವಸ್ಥಿತಗೊಳಿಸಿದ್ದ ಅವರು, ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೂ ಒತ್ತು ನೀಡಿದ್ದರು. ಅವರ ಆದರ್ಶ ಚಿಂತನೆಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್ ಮಾತನಾಡಿ, ಕೆಂಪೇಗೌಡರ ಅಭಿವೃದ್ಧಿ ಪರ ದೃಷ್ಟಿಕೋನವು ಆಧುನಿಕ ಸರಕಾರಗಳಿಗೆ ಮಾದರಿಯಾಗಿದೆ. ಅವರ ಜಯಂತಿ ಆಚರಣೆಯು ಶ್ಲಾಘನೀಯವಾಗಿದೆ ಎಂದರು.
ಐಕಳ ಪೊಂಪೈ ಕಾಲೇಜು ಪ್ರಾಂಶುಪಾಲ ಡಾ.ಪುರುಷೋತ್ತಮ್ ಕೆ.ವಿ. ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ , ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಒಕ್ಕಲಿಕ ಸಂಘದ ಜಿಲ್ಲಾಧ್ಯಕ್ಷ ಬಾಲಕೃಷ್ಣ ಡಿ.ಬಿ, ಒಕ್ಕಲಿಗ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯಗೌಡ, ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಾಹಿತ್ಯ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.