
ಹಿರಿಯ ಭೌತಶಾಸ್ತ್ರಜ್ಞ ಐ.ವಿ. ರಾವ್ ನಿಧನ
ಮಂಗಳೂರು: ಹಿರಿಯ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಇನೋಳಿ ವಾಸುದೇವ ರಾವ್(80) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಸಮಸ್ಯೆಗಳಿಂದ ಜೂ.9 ರಂದು ನಿಧನ ಹೊಂದಿದರು.
ಪ್ರೊ. ಐ.ವಿ. ರಾವ್ ಎಂದೇ ಪ್ರಸಿದ್ಧರಾಗಿದ್ದ ಇವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ, ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ವೃತ್ತಿ ಮುಂದುವರೆಸಿ, ನಂತರ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.
ಬಾಸ್ಕೋ ಪಬ್ಲಿಕೇಶನ್ಸ್ ಪ್ರಕಟಿಸುತ್ತಿದ್ದ ಪದವಿ ಪೂರ್ವ ಶಿಕ್ಷಣಕ್ಕಾಗಿ ಭೌತಶಾಸ್ತ್ರಕ್ಕೆ ಸಂಬಂಧಿಸಿ ಪಠ್ಯಪುಸ್ತಕಗಳನ್ನು ಹಾಗೂ ಸಿ.ಇ.ಟಿ ಪುಸ್ತಕಗಳನ್ನು ಹಲವಾರು ವರುಷಗಳ ಕಾಲ ಬರೆದಿರುತ್ತಾರೆ. 1970ರ ದಶಕದಲ್ಲಿ ಕೆ.ಆರ್.ಇ.ಸಿ.ಯ ಸೈನ್ಸ್ ಫೌಂಡೇಶನ್ ಪ್ರಕಟಿಸುತ್ತಿದ್ದ ‘ವಿಜ್ಞಾನಲೋಕ’ ಪುಸ್ತಕದ ಲೇಖಕರಾಗಿ ಸಂಪಾದಕರಾಗಿ ದುಡಿದಿರುತ್ತಾರೆ.
ಸುಮಾರು 15 ವರುಷಗಳ ಕಾಲ ವಿಶ್ವಹಿಂದೂ ಪರಿಷತ್ತಿನ ಸಂಸ್ಕಾರ ಕೇಂದ್ರದ ರೂವಾರಿಯಾಗಿ ನಗರ ಸಂಕೀರ್ತನೆ, ಮಕ್ಕಳಿಗಾಗಿ ಅಧ್ಯಾತ್ಮ ಶಿಬಿರಗಳನ್ನು ನಡೆಸುವಲ್ಲಿ ಶ್ರಮಿಸಿದ್ದರು. ಪೋರ್ಚುಗೀಸರ ಕಾಲದಲ್ಲಿ ನಾಶಗೊಂಡು ಭೂಗತವಾಗಿದ್ದ ಇನೋಳಿ ಶ್ರೀ ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಇತಿಹಾಸ ಪ್ರಸಿದ್ಧ ದೇಗುಲವು ಮತ್ತೆ ತಲೆಯೆತ್ತಿ ನಿಲ್ಲುವಂತೆ ಮಾಡಲು ಅವಿರತ ಶ್ರಮಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪ್ರತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುವರ್ಗವನ್ನು, ವಿದ್ಯಾರ್ಥಿ ಸಮೂಹವನ್ನು, ಸಮಾಜ ಬಂಧುಗಳನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.