
ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಇಂಟಿಗ್ರೇಟೆಡ್ ಸಿ.ಎ. ಮತ್ತು ಸಿ.ಎಸ್ ಫೌಂಡೇಶನ್ ಕೋರ್ಸ್ನ ಉದ್ಘಾಟನೆ
Wednesday, June 18, 2025
ಮಂಗಳೂರು: ಮಂಗಳೂರಿನ ಶಕ್ತಿ ನಗರದ ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ. ಮತ್ತು ಸಿ.ಎಸ್ ಕೋರ್ಸ್ಗಳನ್ನು ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ತ್ರಿಶಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಸಿ.ಎ. ಗೋಪಾಲಕೃಷ್ಣ ಭಟ್ ದೀಪ ಬೇಳಗಿಸಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಸಿ.ಎ. ಮತ್ತು ಸಿ.ಎಸ್ ವಿದ್ಯಾಬ್ಯಾಸ ಕಷ್ಟದ ವಿಷಯವಲ್ಲ. ಬಹಳಷ್ಟು ಜನರು ಸಿಎ ಮತ್ತು ಸಿಎಸ್ ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ ಅದನ್ನು ಸಾಧಿಸುವುದರಲ್ಲಿ ವಿಫಲರಾಗುತ್ತಾರೆ. ಆದ್ದರಿಂದ ಸಾಮಾನ್ಯವಾಗಿ ಇದೊಂದು ಕಠಿಣ ವಿದ್ಯೆ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ದೃಢವಾದ ನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಪ್ರತಿಯೊಬ್ಬರೂ ಸಿಎ ಮತ್ತು ಸಿಎಸ್ ವಿದ್ಯಾಭ್ಯಾಸವನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಇದರ ಜೊತೆಗೆ ಈ ಕೋರ್ಸ್ಗಳಲ್ಲಿರುವ ವಿವಿಧ ಹಂತಗಳು ಇದರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ಹೇಳಿದರು. ಇಲ್ಲಿ ಪಡೆಯುವ ತರಬೇತಿ ಕೇವಲ ಸಿಎ ಮತ್ತು ಸಿಎಸ್ ಕೋರ್ಸ್ಗೆ ಮಾತ್ರವಲ್ಲದೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಸರ್ಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗೂ ಇದು ಉಪಕಾರಿಯಾಗುತ್ತದೆ. ಆದ್ದರಿಂದ ಈ ಕೋರ್ಸ್ ಮೂಲಕ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳು ಲಭ್ಯವಿದೆ ಎಂದು ಹೇಳಿದರು.
ಪಿಯುಸಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯುವ ಅಂತಿಮ ಪರೀಕ್ಷೆಯ ನಂತರ ಮೇ ತಿಂಗಳಲ್ಲಿ ಸಿಎ ಮತ್ತು ಸಿಎಸ್ನ ಫೌಂಡೇಶನ್ ಕೋರ್ಸ್ನ ಪರೀಕ್ಷೆ ನಡೆಯಲಿದೆ. ನಾವು ಯೋಜನಾ ಬದ್ಧವಾಗಿ ಅಭ್ಯಾಸ ಮಾಡಿದರೆ ಈ ಪರೀಕ್ಷೆಯಲ್ಲಿ 50 ಶೇಕಡಕ್ಕಿಂತ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದರೆ ಮುಂದಿನ ಹಂತದ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆಯುತ್ತಾರೆ. ಆದ್ದರಿಂದ ನಾವೆಲ್ಲರೂ ತುಂಬಾ ಚೆನ್ನಾಗಿ ತಯಾರಿಯನ್ನು ನಡೆಸಬೇಕು. ನಮ್ಮ ದೇಶಕ್ಕೆ ಸುಮಾರು ಹತ್ತು ಲಕ್ಷಕ್ಕಿಂತ ಹೆಚ್ಚಿನ ಸಿಎಗಳ ಅವಶ್ಯಕತೆ ಇದೆ. ಭಾರತ ಜಗತ್ತಿನಲ್ಲಿ ಆರ್ಥಿಕತೆಯಲ್ಲಿ ಬೇರೆ ರಾಷ್ಟ್ರಗಳಿಗೆ ಹೊಲಿಸಿದಾಗ ಅತಿ ವೇಗದಲ್ಲಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಕೋರ್ಸ್ಗಳಿಗೆ ದೊಡ್ಡ ಪ್ರಮಾಣದ ಬೇಡಿಕೆ ಇದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ. ನಾಕ್ ಉಪಸ್ಥಿತರಿದ್ದು ಸಿ.ಎ. ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಶ್ರೀನಿಧಿ ಭಟ್, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್ ಮುಸ್ತಫಾ, ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹಾಗೂ ಉಪಪ್ರಾಂಶುಪಾಲ ನಟೇಶ್ ಆಳ್ವ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕಿ ಅಶ್ವಿನಿ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಲಿಸಾ ವಂದಿಸಿದರು.