
ರೈತರ ಭೂಮಿ ಸ್ವಾಧೀನದ ವಿರುದ್ದದ ಹೋರಾಟವನ್ನು ಹತ್ತಿಕ್ಕಲು ಮುಂದಾದ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ
ಮಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿರುವುದರ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕರ್ನಾಟಕ ರಾಜ್ಯ ಸರಕಾರವು ರಾಜ್ಯ ಮಟ್ಟದ ರೈತ ಕಾರ್ಮಿಕ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ನಾಯಕ ಕೆ. ಯಾದವ ಶೆಟ್ಟಿ ಅವರು, ಮಣ್ಣಿನ ಮಗ,ರೈತನ ಮಗನೆಂದು ಬೊಗಳೆ ಬಿಟ್ಟು ರೈತರ ಹೆಸರಿನಲ್ಲಿ ರಾಜಕಾರಣ ನಡೆಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಮುಲಾಜಿಲ್ಲದೆ ರೈತರ ಭೂಮಿಯನ್ನು ಕಬಳಿಸಲು ಹೊರಟಿದೆ.ಕಳೆದ 1180 ದಿನಗಳಿಂದ ನಿರಂತರವಾಗಿ ಹೋರಾಟದಲ್ಲಿ ನಿರತರಾದ ರೈತರ ಬಳಿ ಮಾತನಾಡುವ ಕನಿಷ್ಠ ಸೌಜನ್ಯವೂ ರಾಜ್ಯ ಸರಕಾರಕ್ಕಿಲ್ಲದೆ ಇರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ ಎಂದು ಹೇಳಿದರು.
AITUC ಜಿಲ್ಲಾ ನಾಯಕರಾದ ಬಿ. ಶೇಖರ್ ಅವರು ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟವನ್ನು ಅರಿಯದ ಕಾಂಗ್ರೆಸ್ ಸರಕಾರ ರಾಜ್ಯದ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲು ಭಾರೀ ಉತ್ಸುಕವಾಗಿದೆ. ದೇಶದ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ತುತ್ತೂರಿ ಬಾರಿಸುವುದರಲ್ಲಿ ಕಾಂಗ್ರೆಸ್ ಬಿಜೆಪಿಯ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕಳೆದ ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಬೀದಿಗಿಳಿದ ದೇವನಹಳ್ಳಿಯ ರೈತರು ತಮ್ಮ ಭೂಮಿಯ ರಕ್ಷಣೆಗಾಗಿ ಬಿಜೆಪಿ ಸರಕಾರದ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು.ಬಳಿಕ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಬಿಜೆಪಿ ಮಾಡಿದ ರೈತ ವಿರೋಧಿ ತೀರ್ಮಾನವನ್ನು ಧಿಕ್ಕರಿಸಿ ರೈತರಿಗೆ ನ್ಯಾಯ ನೀಡುವ ಬದಲು ಅದೇ ತೀರ್ಮಾನವನ್ನು ಮುಂದುವರಿಸುವುದಾದರೆ ರೈತರ ಭೂಮಿಯ ಪ್ರಶ್ನೆಯಲ್ಲಿ ಕಾಂಗ್ರೆಸ್ ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ಜಿಲ್ಲಾ ನಾಯಕರಾದ ಸನ್ನಿ ಡಿಸೋಜ, CITU ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು, AITUC ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಮಾತನಾಡಿದರು.
ಪ್ರತಿಭಟನೆಯಲ್ಲಿ CITU ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಅಶೋಕ್ ಶ್ರೀಯಾನ್, ನಾಗೇಶ್ ಕೊಟ್ಯಾನ್, ಇಬ್ರಾಹಿಂ ಮದಕ, AITUC ಮುಖಂಡರಾದ ವಿ ಕುಕ್ಯಾನ್, ಪ್ರಭಾಕರ್ ರಾವ್, ತಿಮ್ಮಪ್ಪ ಕಾವೂರು, ಕೃಷ್ಣಪ್ಪ ಭಾಸ್ಕರ್, AIKS ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, DYFI ಮುಖಂಡರಾದ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ತಯ್ಯುಬ್ ಬೆಂಗರೆ, ರಾಜ್ಯ ರೈತ ಸಂಘದ ಸ್ಟೀವನ್ ಡಿಸೋಜ, ಮಹಿಳಾ ಸಂಘಟನೆಯ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಅಸುಂತ ಡಿಸೋಜ, ಮಾಧುರಿ ಬೋಳಾರ, ಜಯಲಕ್ಷ್ಮಿ, ದಲಿತ ನಾಯಕರಾದ ಸದಾಶಿವ ಪಡುಬಿದ್ರೆ, ಕಮಲಾಕ್ಷ ಬಜಾಲ್, ತಿಮ್ಮಯ್ಯ ಕೊಂಚಾಡಿ, ಸಮುದಾಯದ ವಾಸುದೇವ ಉಚ್ಚಿಲ್, ಪ್ರಗತಿಪರ ಚಿಂತಕರಾದ ಡಾ. ಕೃಷ್ಣಪ್ಪ ಕೊಂಚಾಡಿ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಶೇಖರ್ ವಾಮಂಜೂರು, ಕರಿಯ ಕೆ., ಬೀದಿಬದಿ ವ್ಯಾಪಾರಸ್ಥರ ಸಂಘದ ಹಸನ್ ಕುದ್ರೋಳಿ, ವಿಜಯ ಜೈನ್, ಮುಜಾಫರ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.