
ಪೊಲೀಸ್ ಗೂಂಡಾಗಿರಿ ಮುಂದುವರೆದರೆ ಬೀದಿಗಿಳಿದು ಹೋರಾಟ: ಬಿ.ವೈ. ವಿಜಯೇಂದ್ರ
ಮಂಗಳೂರು: ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮುಂದುವರೆದರೆ ತಕ್ಕ ಪ್ರತಿಫಲ ಎದುರಿಸಬೇಕಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ, ಕಾನೂನಿನ ದುರ್ಬಳಕೆ ಮಾಡಿ ಏಕಪಕ್ಷೀಯವಾಗಿ ನಡೆಸುತ್ತಿರುವ ಬಲವಂತದ ಕ್ರಮಗಳ ಸಹಿತ ಇತ್ತೀಚಿನ ಘಟನಾವಳಿಗಳ ಬಗ್ಗೆ ಪರಾಮರ್ಶೆ ಮತ್ತು ಪರಿಶೀಲನೆ ನಡೆಸಲು ಜಿಲ್ಲೆಗೆ ಬಂದ ಬಿಜೆಪಿ ನಿಯೋಗದ ನೇತೃತ್ವ ವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಕಾರ್ಯಕರ್ತರು ಸಮಾಧಾನದಿಂದ ಇದ್ದಾರೆ ಎನ್ನುವುದನ್ನು ದೌರ್ಬಲ್ಯ ಎಂದುಕೊಳ್ಳಬೇಡಿ. ಕಾರ್ಯಕರ್ತರ ಮನೆಗೆ ಮಧ್ಯರಾತ್ರಿ ನುಗ್ಗಿ ಪೊಲೀಸರು ಗೂಂಡಾಗಿರಿ ಮಾಡುವುದನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ. ಆಂದೋಲನ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇಂದು ಜಿಲ್ಲಾಡಳಿತ, ಎಸ್ಪಿ, ಕಮಿಷನರ್ ಭೇಟಿಯಾಗಿ ಇಲ್ಲಿಯ ಪರಿಸ್ಥಿತಿಯ ಕುರಿತು ಚರ್ಚಿಸಿದ್ದೇವೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಬಳಿಕ ಕಾನೂನು ಸುವ್ಯವಸ್ಥೆ ನೆಪದಲ್ಲಿ ಪೊಲೀಸ್ ಇಲಾಖೆ ಗೂಂಡಾ ವರ್ತನೆ ಮಾಡಲಾಗುತ್ತಿದೆ. ಮಧ್ಯರಾತ್ರಿ ಕಾರ್ಯಕರ್ತರ ಮನೆಗೆ ಭೇಟಿ ಮಾಡುವುದು, ಸಂಘ ಪರಿವಾರದ ಮುಖಂಡರ ಗುರಿಯಾಗಿಸುವುದು, ರಾತ್ರಿ ಭಾವಚಿತ್ರ ತೆಗೆಯುವುದು, ರಿವಾಲ್ವರ್ ತೋರಿ ಬೆದರಿಕೆ ಹಾಕುವ ಪ್ರವೃತ್ತಿ ಹೆಚ್ಚಿದೆ. ಒಂದು ವರ್ಗದವರನ್ನು ಓಲೈಸುವ ದಿಸೆಯಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ರಾಜ್ಯ ಸರಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಮೀರಿದವರನ್ನು ದಂಡಿಸಿ ಆದರೆ ಓಲೈಕೆ ರಾಜಕಾರಣ ಬೇಡ ಎಂದರು.
ಕಾಂಗ್ರೆಸ್ ಸರಕಾರ ಕೆಲ ತಿಂಗಳ ಹಿಂದೆ ಕೋಮು ನಿಗ್ರಹ ದಳ ಸ್ಥಾಪನೆ ಮಾಡಿದೆ. ಅದರ ನಂತರ ಇದು ಹೆಚ್ಚಾಗಿದೆ. ಕೋಮು ನಿಗ್ರಹ ದಳ ಇರುವುದೇ ಹಿಂದೂ ಕಾರ್ಯಕರ್ತರ ಗುರಿ ಮಾಡಲು. ಹಿಂದೂಗಳ ಭದ್ರಕೋಟೆಯಲ್ಲಿ ಭಯ ಹುಟ್ಟುಹಾಕುವ ಷಡ್ಯಂತ್ರ ಇದು ಎಂದು ವಿಜಯೇಂದ್ರ ಆರೋಪಿಸಿದರು.
ಸುಹಾಸ್ ಶೆಟ್ಟಿ ಕೊಲೆಯಲ್ಲಿ ನಿಷೇಧಿತ ಸಂಘಟನೆ ಪಿಎಫ್ಐ ಪಾತ್ರ ಇರುವ ಸಂಶಯ ಇರುವುದರಿಂದ ಎನ್ಐಎ ತನಿಖೆ ಕೈಗೆತ್ತಿಕೊಂಡಿದೆ. ನಾವೇನೂ ಪೊಲೀಸರಿಂದ ಉಪಕಾರ ಬಯಸುತ್ತಿಲ್ಲ, ಆದರೆ ಸರಕಾರದ ಒತ್ತಡಕ್ಕೆ ಮಣಿದರೆ ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವ ಕಾಲ್ತುಳಿತದ ಪ್ರಕರಣದಂತೆ ಇಲ್ಲೂ ಪೊಲೀಸರ ತಲೆದಂಡ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನೂ ಪೊಲೀಸರಿಗೆ ತಿಳಿಸಿದ್ದೇವೆ. ಇನ್ನು ಮುಂದೆ ಇದು ಆಗದಂತೆ ಭರವಸೆ ಕೊಟ್ಟಿದ್ದಾರೆ. ಲವ್ ಜಿಹಾದ್, ಗೋಹತ್ಯೆ, ಮಾದಕ, ಮರಳು ಮಾಫಿಯಾ ಎಲ್ಲವೂ ನಿಲ್ಲಬೇಕು, ಆಗ ಎಲ್ಲ ಸರಿಯಾಗುತ್ತದೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ದ.ಕ. ಜಿಲ್ಲೆಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಠಾಣೆಗಳಾಗಿ ಕಾರ್ಯನಿರ್ವಹಿಸುತ್ತಿದೆ. ಪೊಲೀಸರು ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮಹಿಳೆಯರಿರುವ ಮನೆಗೆ ಮಧ್ಯರಾತ್ರಿ ಹೋಗಿ ಒಂದು ರೀತಿ ಭಂಯ ಮೂಡಿಸುವಂತೆ ವರ್ತಿಸುತ್ತಿದ್ದಾರೆ. ಈ ಕ್ರಮಕ್ಕೆ ಯಾವ ಕಾನೂನಿನಲ್ಲಿ ಅವಕಾಶ ಇದೆ. ಈ ಸರಕಾರ ಶಾಶ್ವತವಲ್ಲ. ಇನ್ನೂ ಉಳಿದಿರುವುದು ಎರಡು ವರ್ಷ ಮಾತ್ರ, ಸದ್ಯದ ಪರಿಸ್ಥಿತಿ ನೋಡಿದರೆ ಈ ಸರಕಾರ ಯಾವಾಗ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪೊಲೀಸರು ನ್ಯಾಯ ನೀಡಬೇಕು, ಪಕ್ಷಾಪಾತಿಯಾಗಬಾರದು ಎಂದರು.
ಪರಿಷತ್ ಪ್ರತಿಪಕ್ಷ ನಾಯಕ, ಚಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಪರಿಷತ್ ಸದಸ್ಯರಾದ ರವಿಕುಮಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಭಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಅರವಿಂದ ಬೆಲ್ಲದ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಯತೀಶ್ ಅರ್ವಾರ್ ಉಪಸ್ಥಿತರಿದ್ದರು.