
ಕ್ರಿಯೆಗೆ ಪ್ರತಿಕ್ರಿಯೆ ಒಪ್ಪುವಂತದ್ದಲ್ಲ: ಎಂ.ಜಿ. ಹೆಗಡೆ
ಮಂಗಳೂರು: ಜಿಲ್ಲೆಯಲ್ಲಿ ಕೋಮುಗಲಭೆಯ ವಿಚಾರದಲ್ಲಿ ಹಿಂಸೆಗೆ ಕ್ರಿಯೆಗೆ ಪ್ರಕ್ರಿಯೆಯನ್ನು ಜನತೆ ಎಂದಿಗೂ ಒಪ್ಪುವುದಿಲ್ಲ. ನಮ್ಮ ತಪ್ಪುಗನ್ನು ನಾವು ಮೊದಲು ಒಪ್ಪಿಕೊಳ್ಳಬೇಕು ಒಪ್ಪಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ ಹೇಳಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಈದುಲ್ ಅಝ್ಹಾದ ಪ್ರಯುಕ್ತ ಸ್ನೇಹ ಕೂಟ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಒಟ್ಟಿಗೆ ಸೌಮ್ಯತೆಯಿಂದ ಬದುಕುತ್ತಿದ್ದೆವೆ. ಇಲ್ಲಿ ಬೆರಳೆಣಿಕೆಯಷ್ಟು ಜನರಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲೆಯಲ್ಲಿ 6 ಲಕ್ಷ ಜನರಿದ್ದು, ಹೆಚ್ಚೆಂದರೆ 10 ಸಾವಿರ ಜನರು ಮಾತ್ರ ಪೆಟ್ಟು-ಗಲಾಟೆ ಎಂದು ಹೋಗುತ್ತಾರೆ. ಆ 10 ಸಾವಿರ ಜನರು ನಮ್ಮನ್ನು ನಡುಗಿಸುತ್ತಿದ್ದಾರೆ ಎಂದು ಹೇಳಿದರು.
ನಾವು ಇಲ್ಲಿ ಹೇಡಿಗಳಾ? ಅಸಹಾಯಕರಾ? ಇಲ್ಲಿ ಕೆಟ್ಟ ತನ ಒಳ್ಳೆಯ ತನವನ್ನು ಆಳುತ್ತಿದೆ. ಕೆಟ್ಟ ತನವನ್ನು ಹೋಗಲಾಡಿಸಲು ಸಾಮೂಹಿಕ ಹಬ್ಬಗಳ ಅಗತ್ಯವಿದೆ. ಮುಸ್ಲಿಂ ಮನೆಯಲ್ಲಿ ಹಬ್ಬವಾಗುತ್ತದೆ ಎಂದರೆ 100 ಜನ ಹಿಂದುಗಳು ಅವರ ಮನೆಗೆ ಹೋಗಬೇಕು. ಹಿಂದುಗಳ ಮನೆಯಲ್ಲಿ ಹಬ್ಬವಾಗುತ್ತದೆ ಎಂದರೆ 100 ಜನ ಮುಸ್ಲಿಂರು ಹಿಂದುಗಳ ಮನೆಗೆ ಬರಬೇಕು ಆಗ ಸಾಮರಸ್ಯ ಸಾಧ್ಯ ಎಂದರು.
ಪತ್ರಕರ್ತ ವಿಜಯ್ ಕೋಟ್ಯಾನ್ ಮಾತನಾಡಿ, ಜಿಲ್ಲೆಯಲ್ಲಿ 0.5% ಜನರು ಮಾತ್ರ ಅಶಾಂತಿಯನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ನಾವುಗಳು ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಡೆಯಬೇಕು. ಇಲ್ಲಿಯ ಈ ವಾತಾವರಣಕ್ಕೆ ಇಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳೇ ಕಾರಣ. ಅವುಗಳಿಗೆ ಕಡಿವಾಣ ಬಿದ್ದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಿದರು.
ಪತ್ರಕರ್ತ ರೇಮಂಡ್ ಡಿಕುನ್ನಾ, ಜಮಾನುದಿನ್ ಮಸೀದಿಯ ಅಧ್ಯಕ್ಷ ಮೊಹಮದ್ ಇಸಾಕ್ ಮಾತನಾಡಿದರು.
ರಾಜಕೀಯ ನಾಯಕರು, ಅನೇಕ ಸಂಘ ಸಂಸ್ಥೆಗಳ ಮುಖಂಡರು, ಪತ್ರಕರ್ತರು, ಲೇಖಕರು, ಸಾಮಾಜಿಕ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.