
ಜವನೆರ್ ಬೆದ್ರದಿಂದ ಬೃಹತ್ ರಕ್ತದಾನ, ಸಸಿ ವಿತರಣೆ
ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್, ಫಾದರ್ ಮುಲ್ಲರ್ ಹಾಸ್ಪಿಟಲ್ ಹಾಗೂ ಆಳ್ವಾಸ್ ಹೋಮಿಯೋಪತಿ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಮತ್ತು ಸಸಿ ವಿತರಣಾ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ಶುಕ್ರವಾರ ನಡೆಯಿತು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರು ಸಮಾಜಮುಖಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುರ್ತು ಸಂಧರ್ಭದಲ್ಲಿ ರಕ್ತದಾನದ ಅಗತ್ಯತೆಗಳ ಬಗ್ಗೆ ವಿವರಿಸಿದರು.
ಮಾಜಿ ಸಚಿವ ಕೆ. ಆಭಯಚಂದ್ರ ಜೈನ್ ಅವರು ಸುಮಾರು 72ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಬೆಳುವಾಯಿ ಪ್ರವೀಣ್ ಜೈನ್ ಅವರನ್ನು ‘ಮಹಾ ರಕ್ತದಾನಿ ಮಾಣಿಕ್ಯ’ ಎಂಬ ಗೌರವ ಬಿರುದು ನೀಡಿ ಸನ್ಮಾನಿಸಿ ಮಾತನಾಡಿ ಜವನೆರ್ ಬೆದ್ರ ಫೌಂಡೇಶನ್(ರಿ) ಸ್ವಚ್ಚತೆ ಹಾಗೂ ರಕ್ತದಾನಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಅವರು ರಕ್ತದಾನ ಮಾಡುವುದರಿಂದ ಇತರ ರೋಗಗಳು ನಮ್ಮ ದೇಹವನ್ನು ಪ್ರವೇಶಿಸದಂತೆ ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು. ಇದರ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಧ್ಯಪಕ ಡಾ.ಪ್ರವೀಣ್ ರಾಜ್ ಆಳ್ವ, ಯುವ ವಾಹಿನಿ ಮೂಡುಬಿದಿರೆ(ರಿ) ಅಧ್ಯಕ್ಷ ಮುರಳೀಧರ್ ಕೋಟ್ಯಾನ್, ಸರ್ವೋದಯ ಫ್ರೇಂಡ್ಸ್ನ ಅಧ್ಯಕ್ಷ ಗುರು ಒಂಟಿಕಟ್ಟೆ, ರೋಟರಿ ಕ್ಲಬ್ ಅಫ್ ಮೂಡಬಿದ್ರೆ(ರಿ) ಟೆಂಪಲ್ ಟೌನ್ ಅಧ್ಯಕ್ಷರಾದ ಪೂರ್ಣಚಂದ್ರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷ ಬಿಂದ್ಯಾ ಶರತ್ ಶೆಟ್ಟಿ ಹಾಗೂವೈದ್ಯರಾದ ಡಾ. ಚಾರು ಕೋಸ್ಲಾ ಉಪಸ್ಥಿತರಿದ್ದರು.
ಜವನೆರ್ ಬೆದ್ರ ಫೌಂಡೇಶನ್(ರಿ) ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿಗಳಾದ ರಾಜೇಶ್ ಕೋಟೆಗಾರ್, ರಂಜಿತ್ ಶೆಟ್ಟಿ, ಟ್ರಸ್ಟಿ/ ಜವನೆರ್ ಬೆದ್ರ ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ ,ಜವನೆರ್ ಬೆದ್ರರಕ್ತ ನಿಧಿಯ ಸಂಚಾಲಕ ಮನು ಎಸ್ ಒಂಟಿಕಟ್ಟೆ, ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ನ ಸಹನಾ, ಜವನೆರ್ ಬೆದ್ರ ಭಕುತಿ ಭಜನ ವೃಂದ ಸಂಚಾಲಕ ಪ್ರಥಮ್ ಎಸ್. ಬನ್ನಡ್ಕ ಸೇರಿ ಎಲ್ಲಾ ಪದಾಧಿಕಾರಿಗಳು ಈ ಸಂದಭ೯ದಲ್ಲಿದ್ದರು.
ಜವನೆರ್ ಬೆದ್ರ ಫೌಂಡೇಶನ್(ರಿ) ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳಾನ್ನಾಡಿದರು. ಸುಮಾಲತಾ ಅವರು ಗೌರವ ಸನ್ಮಾನ ಪಡೆದ 15 ‘ರಕ್ತ ನಿಧಿ ಮಾಣಿಕ್ಯರ’ ಪ್ರಶಸ್ತಿ ಪ್ರಮಾಣ ಪತ್ರ ವಾಚಿಸಿದರು ಹಾಗೂ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಪ್ರಥಮ್ ಎಸ್. ಬನ್ನಡ್ಕ ಅವರು ವಂದಿಸಿದರು.
ದಾಖಲೆಯ 115 ಜನರಿಂದ ರಕ್ತದಾನ:
ಪ್ರತಿವರ್ಷದಂತೆ ಈ ಬಾರಿಯೂ ರಕ್ತದಾನದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು ಸುಮಾರು 135ಕ್ಕೂ ಅಧಿಕ ಜನರು ರಕ್ತ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ 115 ಜನರು ರಕ್ತದಾನ ಮಾಡುವ ಮೂಲಕ ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿದರು. ಕಳೆದ ವರ್ಷವೂ 115 ಜನರು ರಕ್ತದಾನ ಮಾಡಿರುವುದು ಮತ್ತೊಂದು ವಿಶೇಷ. ‘ದಸ್ಕತ್’ ಸಿನಿಮಾದ ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆ ರಕ್ತದಾನ ಮಾಡುವ ಮೂಲಕ ಮಾದರಿಯಾದರು.