
ಕಾಂಗ್ರೆಸ್ ಸರಕಾರದ ಆಡಳಿತವನ್ನು ವಿರೋಧಿಸಿ ಮೂಡುಬಿದಿರೆ ಪುರಸಭೆಯ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ
Monday, June 23, 2025
ಮೂಡುಬಿದಿರೆ: ರಾಜ್ಯ ಸರಕಾರದ ಜನ ವಿರೋಧಿ ಆಡಳಿತವನ್ನು ಖಂಡಿಸಿ ಬಿಜೆಪಿ ಬೆಂಬಲಿತ ಪುರಸಭಾ ಸದಸ್ಯರು ಮತ್ತು ಪಕ್ಷದ ಪ್ರಮುಖರು ಮೂಡುಬಿದಿರೆ ಪುರಸಭೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಸಂವಿಧಾನ ವಿರೋಧಿ ಸರಕಾರ ಆಡಳಿತ ನಡೆಸುತ್ತಿದೆ ದ್ವೇಷ ಸಾಧನೆ ಮಾಡುವ ಸರಕಾರ ಇದಾಗಿದೆ. ಬಿಜೆಪಿ ಶಾಸಕರು ಸಹಿತ ಜನಪ್ರತಿನಿಧಿಗಳ ಮತ್ತು ಪದಾಧಿಕಾರಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿ ಕೇಸುಗಳನ್ನು ಹಾಕಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ಭ್ರಷ್ಟಾಚಾರವೇ ಎಲ್ಲಾ, ಅಭಿವೃದ್ಧಿ ಇಲ್ಲ ಎಂಬ ಧೋರಣೆ ಇದೆ ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರುಗಳು, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಲಕ್ಷ್ಮಣ ಪೂಜಾರಿ, ಪ್ರಮುಖರಾದ ಸುಕೇಶ್ ಶೆಟ್ಟಿ, ರಾಜೇಶ್ ಮಲ್ಯ ಮತ್ತಿತರರು ಭಾಗವಹಿಸಿದ್ದರು.