
ಅನಧಿಕೃತವಾಗಿ ಕಾಯ೯ಚರಿಸುತ್ತಿದ್ದ ಮೇ.ಕ್ಲೀನ್&ಕ್ರಿಸ್ಟ್ ಲಾಂಡ್ರಿಗೆ ಪುತ್ತಿಗೆ ಗ್ರಾ.ಪಂನಿಂದ ಬೀಗ ಮುದ್ರೆ
ಮೂಡುಬಿದಿರೆ: ಪಂಚಾಯತ್ ಪರವಾನಗಿ ಇಲ್ಲದೇ ವಾಣಿಜ್ಯ ಉದ್ದೇಶಕ್ಕೆ ಭೂಪರಿವರಿವರ್ತನೆ ಆಗದೇ, ಮೂಡಾ ಅನುಮತಿ ಇಲ್ಲದೇ ಪರಿಸರ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೇ ತನ್ನ ಬಂಡವಾಳಶಾಹಿತ್ವದಿಂದ ನಿರಕುಂಶವಾಗಿ ಸುಮಾರು 200 ಕೆಲಸಗಾರರೊಂದಿಗೆ ಹಂಸ ನಗರದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮೇ.ಕ್ಲೀನ್ & ಕ್ರಿಸ್ಟ್ ಲಾಂಡ್ರಿಗೆ ಪುತ್ತಿಗೆ ಗ್ರಾಮ ಪಂಚಾಯತ್ ಸೋಮವಾರ ಬೀಗ ಮದ್ರೆ ಹಾಕಿದೆ.
ಫ್ಯಾಕ್ಟರಿಯಿಂದ ಹೊರಬರುವ ರಾಸಾಯನಿಕಗಳನ್ನು ಒಳಗೊಂಡ ತ್ಯಾಜ್ಯ ನೀರನ್ನು ಸಂಸ್ಕರಿಸದೇ ತೊಟ್ಟಿಯಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಸಾರ್ವಜನಿಕ ಚರಂಡಿಗೆ ಹರಿಯ ಬಿಡುತ್ತಿದ್ದರಿಂದ ಹಂಸನಗರದ ಸುತ್ತಮುತ್ತಲಿನ ನಿವಾಸಿಗಳ ಕುಡಿಯುವ ನೀರಿನ ಬಾವಿ,ಕೊಳಬಾವಿಗಳು ಸಂಪೂರ್ಣ ರಾಸಾಯನಿಕ ಮಿಶ್ರಿತಗೊಂಡು ಕುಡಿಯಲು ಅಯೋಗ್ಯವಾಗಿದ್ದು ಈ ಬಗ್ಗೆ ಸಾರ್ವಜನಿಕರು ಡಿಸೆಂಬರ್ 2024 ರಲ್ಲಿ ಪಂಚಾಯತ್ ಗೆ ದೂರು ದಾಖಲಿಸಿದ್ದರು.
ಈ ಬಗ್ಗೆ ಎಚ್ಚೆತ್ತುಗೊಂಡ ಸ್ಥಳಿಯಾಡಳಿತ ಮೇ.ಕ್ಲೀನ್ & ಕ್ರಿಸ್ಟ್ ಲಾಂಡ್ರಿ ಫ್ಯಾಕ್ಟರಿಗೆ 2024ರ ಡಿಸೆಂಬರ್ 13ರಂದು ಬೀಗ ಮುದ್ರೆ ಹಾಕುವ ಆದೇಶ ಜಾರಿ ಮಾಡಿತ್ತು. ಪಂಚಾಯತ್ ಆದೇಶವನ್ನು ಪ್ರಶ್ನಿಸಿ ಲಾಂಡ್ರಿ ಮಾಲೀಕರು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ 2025 ಮೇ ಒಳಗೆ ಲಾಂಡ್ರಿ ಫ್ಯಾಕ್ಟರಿಯನ್ನು ಬೇರೆಡೆಗೆ ಸ್ಥಳಾಂತರಿಸುತ್ತೇನೆ ಅದುವರೆಗೆ ಪುತ್ತಿಗೆ ಪಂಚಾಯತ್ ವತಿಯಿಂದ ಲಾಂಡ್ರಿ ಫ್ಯಾಕ್ಟರಿಗೆ ಬೀಗ ಮುದ್ರೆ ಹಾಕುವಂತಹ ಬಲವಂತದ ಕ್ರಮ ಕೈಗೊಳ್ಳಬಾರದೆಂದು ತಡೆಯಾಜ್ಞೆ ತಂದಿದ್ದರು.
ಇದೀಗ ತಡೆಯಾಜ್ಞೆ ಅವಧಿ ಮುಗಿದಿದ್ದರೂ ಲಾಂಡ್ರಿ ಫ್ಯಾಕ್ಟರಿಯು ರಾಜಾರೋಷವಾಗಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಪಂಚಾಯತ್ ಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕ್ಕೊಂಡ ಗ್ರಾಮ ಪಂಚಾಯತ್ ಬಂಡವಾಳಶಾಹಿಯ ಲಾಭಿಗೆ ಮಣಿಯದೇ ದಿಟ್ಟ ನಿರ್ಧಾರ ಕೈಗೊಂಡು ಸೋಮವಾರದಂದು ಲಾಂಡ್ರಿ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ.
ಈ ಬಗ್ಗೆ ತಮ್ಮಸಂಕಷ್ಟಕ್ಕೆ ಸ್ಪಂದಿಸಿ ಬಡವರ ದ್ವನಿಯಾಗಿ ಕ್ರಮ ಕೈಗೊಂಡ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ರಾಧ, ಉಪಾಧ್ಯಕ್ಷ ದಯಾನಂದ ಹಾಗೂ ಸರ್ವಸದಸ್ಯರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಭೀಮನಾಯಕ್ ಬಿ ಮತ್ತು ಸಿಬ್ಬಂದಿ ವರ್ಗ ಮತ್ತು ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಅವರಿಗೆ ಹಂಸನಗರದ ನಿವಾಸಿಗಳ ಪರವಾಗಿ ಅಶೋಕ್ ನಜ್ರತ್ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಪಿಡಿಒಗೆ ಬೆದರಿಕೆ:
ದಿಟ್ಟ ನಿಧಾ೯ರವನ್ನು ಕೈಗೊಂಡು ಲಾಂಡ್ರಿ ಫ್ಯಾಕ್ಟರಿಗೆ ಬೀಗ ಮುದ್ರೆ ಹಾಕಲು ಹೋಗಿದ್ದ ಪುತ್ತಿಗೆ ಗ್ರಾ.ಪಂ.ನ ಪಿಡಿಒ ಭೀಮ ನಾಯಕ್ ಬಿ.ಅವರಿಗೆ ಲಾಂಡ್ರಿಯ ಮಾಲಕ ಮೊಬೈಲ್ ಕರೆಯ ಮೂಲಕ ಧಮ್ಕಿ ಹಾಕಿರುವುದಾಗಿ ತಿಳಿದು ಬಂದಿದೆ.