
ಇರುವೈಲಿನಲ್ಲಿ ವಿವೇಕ ಶಾಲಾ ಕೊಠಡಿ ಉದ್ಘಾಟನೆ
ಮೂಡುಬಿದಿರೆ: ತಾಲೂಕಿನ ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಇಲ್ಲಿ ರೂ.41.7 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ 3 ವಿವೇಕ ಶಾಲಾ ಕೊಠಡಿಯನ್ನು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯುತ್ತಾರೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಳ ಬಗ್ಗೆಯೂ ಅರಿಯುತ್ತಾರೆ. ಹಾಗೆಯೇ ಪೋಷಕರು ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ತಿಂಗಳಿಗೊಮ್ಮೆಯಾದರೂ ಶಾಲೆಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸ, ಗುಣ-ನಡತೆಯ ಏರುಪೇರುಗಳ ಕುರಿತು ವಿಚಾರಿಸುತ್ತಿರಬೇಕು. ಆಗ ಪೋಷಕರಿಗೂ ಮಕ್ಕಳ ಆಗು-ಹೋಗುಗಳ ಬಗ್ಗೆ ತಿಳಿಯಲು ಸಾಧ್ಯ ಎಂದರು.
ಶಾಲಾ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ಇರುವೈಲು ಐ ತಾರಾನಾಥ ಪೂಜಾರಿ ಮಾತನಾಡಿ, ಪ್ರತಿಭೆಗಳು ಹುಟ್ಟೋದು ಅರಮನೆಯಲ್ಲಿ ಅಲ್ಲ ಗುಡಿಸಲಲ್ಲಿ, ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗಿದೆ. ಈ ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ದೊರಕುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದ ಅವರು ಯಾವ ಊರಿನ ಶಾಲೆಯಲ್ಲಿ ಗಂಟೆ ಜೋರಾಗಿ ಬಾರಿಸಲ್ಪಡುತ್ತದೋ ಆ ಊರು ಉದ್ಧಾರವಾಗುತ್ತದೆ. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗಾಗಿ ಒಮ್ಮತದಿಂದ ಶ್ರಮಪಡೋಣ ಎಂದು ಹೇಳಿದರು.
ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಟಿ ಹಾಗೂ ಗುತ್ತಿಗೆದಾರ ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ಮುಗೇರ, ಉಪಾಧ್ಯಕ್ಷ ವಲೇರಿಯನ್ ಕುಟಿನ್ಹಾ, ಪಂಚಾಯತ್ ಸದಸ್ಯ ನವೀನ್ ಪೂಜಾರಿ ಕಿಟ್ಟುಬೆಟ್ಟು ಸಹಿತ ಇತರ ಸದಸ್ಯರು,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ, ರುಕ್ಕಯ್ಯ ಪೂಜಾರಿ ಅಳಿಯೂರು, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಫೆರ್ನಾಂಡಿಸ್ ಸ್ವಾಗತಿಸಿದರು, ಶಿಕ್ಷಕಿ ಉಷಾ ಕಾಯ೯ಕ್ರಮ ನಿರೂಪಿಸಿದರು. ಶ್ಯಾಮಲಾ ವಂದಿಸಿದರು.