
ಹಾನಿಯಾದ ರಸ್ತೆಗಳನ್ನು ಕೂಡಲೇ ಸರಿಪಡಿಸಲು ಕಾಂಗ್ರೆಸ್ ನಿಯೋಗ ಒತ್ತಾಯ
ಸುಳ್ಯ: ಕುಡಿಯುವ ನೀರಿನ ಪೈಪ್, ಕೇಬಲ್ ಅಳವಡಿಕೆ ವೇಳೆ ಹಾನಿಯಾದ ರಸ್ತೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು, ಈ ಕುರಿತು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕಾಂಗ್ರೆಸ್ ನಿಯೋಗ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದೆ.
ಈ ಕುರಿತು ಅಗತ್ಯ ಕಾಮಗಾರಿಗಳಿಗೆ ತುರ್ತು ಪ್ರಸ್ತಾವನೆ ಸಲ್ಲಿಸಲು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ನಿಯೋಗ ಸುಳ್ಯ ಲೋಕೋಪಯೋಗಿ ಇಲಾಖೆ ಉಪ ವಿಭಾಗಕ್ಕೆ ಭೇಟಿ ಸಲಹೆ ನೀಡಿತು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ್ ಮತ್ತು ಸಹಾಯಕ ಇಂಜಿನಿಯರ್ ಪರಮೇಶ್ವರ್ ಅವರ ಬಳಿ ಈ ಕುರಿತು ಚರ್ಚಿಸಿ ಸುಳ್ಯ ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟ ರಸ್ತೆಗಳ ಬದಿಯಲ್ಲಿ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಮತ್ತು ವಿದ್ಯುತ್ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದು ಇದರಿಂದಾಗಿ ರಸ್ತೆ ಹಾನಿಯಾಗಿರುವ ಕುರಿತು ಅಂದಾಜು ಪಟ್ಟಿ ತಯಾರಿಸಿ ಉಂಟಾಗಿರುವ ನಷ್ಟವನ್ನು ಘೋಷಿಸಬೇಕು ಮತ್ತು ಅದರ ಮರುಸ್ಥಾಪನೆಗೆ ಅಂದಾಜು ಪಟ್ಟಿ ತಯಾರಿಸಬೇಕು. ಹಾನಿ ಮಾಡಿರುವ ಇಲಾಖೆ ಅಥವಾ ಗುತ್ತಿಗೆದಾರರಿಂದ ಕೂಡಲೇ ದುರಸ್ಥಿ ಪಡಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಇತರ ಪ್ರಮುಖ ರಸ್ತೆಗಳ ದುರಸ್ಥಿ ಮತ್ತು ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕು, ಸರಕಾರದ ಮಟ್ಟದಲ್ಲಿ ಒತ್ತಡ ತರುವ ಪ್ರಯತ್ನ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಬೊಳ್ಳೂರು ಭರವಸೆ ನೀಡಿದರು.
ಅಲ್ಲದೆ ಮಳೆಗಾಲದ ರಸ್ತೆ ಬದಿ ಚರಂಡಿ ಸ್ವಚ್ಛ ಗೊಳಿಸುವ ಕಾರ್ಯವನ್ನು ಆದಷ್ಟು ಬೇಗ ಮುಗಿಸಬೇಕು, ಮಳೆಗಾಲ ಮುಗಿದ ಕೂಡಲೇ ಇತರ ಅನುಮೋದನೆ ಗೊಂಡಿರುವ ಕಾಮಗಾರಿಗಳನ್ನು ಸಮಯಮಿತಿಯಲ್ಲಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ, ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ದಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ವಿಜಯಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು.