ಐಸಿಯುನಲ್ಲಿ ದಾಖಲಿಸಲ್ಪಟ್ಟಿದ್ದ ಇಬ್ಬರು ವಿದೇಶಿಯರು ಚೇತರಿಸಿಕೊಳ್ಳುತ್ತಿದ್ದಾರೆ

ಐಸಿಯುನಲ್ಲಿ ದಾಖಲಿಸಲ್ಪಟ್ಟಿದ್ದ ಇಬ್ಬರು ವಿದೇಶಿಯರು ಚೇತರಿಸಿಕೊಳ್ಳುತ್ತಿದ್ದಾರೆ

ಮಂಗಳೂರು: ಕೇರಳದ ಬೇಪ್ಪೂರ್ ಆಳ ಸಮುದ್ರದಲ್ಲಿ ಸೋಮವಾರ ಅಗ್ನಿ ದುರಂತಕ್ಕೀಡಾಗಿದ್ದ ಸಿಂಗಾಪುರದ ಹಡಗಿನಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲ್ಪಟ್ಟಿದ್ದ ಇಬ್ಬರು ವಿದೇಶಿಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಚೀನಾದ ಲೂಯಾನ್ ಲಿ ಶೇ.40ರಷ್ಟುಸುಟ್ಟಗಾಯಗಳನ್ನು ಹೊಂದಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ. ಇಂಡೋನೇಷ್ಯಾದ ಪ್ರಜೆ ಸೋನಿಟೋರ್ ಕೂಡಾ ಐಸಿಯುನಲ್ಲಿದ್ದಾರೆ. ಇವರಿಬ್ಬರ ದೇಹದಲ್ಲಿ ಸುಟ್ಟಗಾಯಗಳಿರುವುದರಿಂದ ಅವರಿಗೆ ಐಸಿಯುನಲ್ಲಿ ಕೆಲ ಸಮಯದ ಚಿಕಿತ್ಸೆಯ ಅಗತ್ಯವಿದೆ. ಆಸ್ಪತ್ರೆಗೆ ದಾಖಲಾಗಿದ್ದ ಉಳಿದ ನಾಲ್ಕು ಮಂದಿಯ ಆರೋಗ್ಯವೂ ಸುಧಾರಿಸುತ್ತಿದ್ದು, ಚೀನಾದ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದ ಮೂರು ಮಂದಿಯ ಕಿವಿ ಮತ್ತು ಮುಖ ಭಾಗದಲ್ಲಿ ಗಾಯಗಳಿದ್ದು, ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೇರಳದ ಬೇಪ್ಪೂರ್ ಕಡಲ ತೀರದಿಂದ 78 ನಾಟಿಕಲ್ ಮೈಲ್ ದೂರದಲ್ಲಿ ಸೋಮವಾರ ಸಿಂಗಾಪುರ ಮೂಲದ ಹಡಗಿಗೆ ಬೆಂಕಿ ಹತ್ತಿಕೊಂಡಿತ್ತು. 22 ಮಂದಿ ಸಿಬ್ಬಂದಿಯ ಹಡಗಿನಲ್ಲಿ ಬೆಂಕಿ ನಂದಿಸುವ ಕಾರ್ಯ ಬುಧವಾರವೂ ಮುಂದುವರಿದಿದೆ.

ಹಡಗಿನ ಸಿಬ್ಬಂದಿ ರಕ್ಷಣೆಗೆ ಚೀನಾ ಧನ್ಯವಾದ:

ಕೇರಳದ ಬೇಪ್ಪೂರ್ ಕಡಲ ತೀರದಲ್ಲಿ ಸೋಮವಾರ ಬೆಂಕಿ ಅವಘಡಕ್ಕೆ ಸಿಲುಕಿರುವ ಸಿಂಗಾಪುರದ ಎಂ.ವಿ ವಾನ್ ಹೈ 503 ಹಡಗಿನಲ್ಲಿದ್ದ ಚೀನಾದ ಸಿಬ್ಬಂದಿಯ ರಕ್ಷಣೆ  ಮಾಡಿರುವ ಬಗ್ಗೆ ಭಾರತಕ್ಕೆ ಚೀನಾದ ಭಾರತೀಯ ರಾಯಭಾರ ಕಚೇರಿಯ ವಕ್ತಾರೆ ಧನ್ಯವಾದ ಸಲ್ಲಿಸಿದ್ದಾರೆ. ಹಡಗಿನಲ್ಲಿದ್ದ 22 ಮಂದಿ ಸಿಬ್ಬಂದಿಯಲ್ಲಿ ತೈವಾನ್‌ನ 6 ಮಂದಿ ಸೇರಿ 14 ಮಂದಿ ಚೀನಾದವರಾಗಿದ್ದಾರೆ. ನಾಪತ್ತೆಯಾಗಿರುವವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯ ಫಲಪ್ರದವಾಗಲಿ ಮತ್ತು ಗಾಯಗೊಂಡವರು ಶೀಘ್ರ ಗುಣಮುಖರಾಗುವುದನ್ನು ಬಯಸುವುದಾಗಿ ಚೀನಾದ ವಕ್ತಾರೆ ಹೇಳಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article