
ಕ್ರೀಡೆಯಲ್ಲಿ ಮಾತ್ರ ಏಕಭಾರತದ ದರ್ಶನ ಸಾಧ್ಯ: ಎನ್. ಜಯಪ್ರಕಾಶ್ ರೈ
ಸುಳ್ಯ: ಎಲ್ಲಾ ಕ್ಷೇತ್ರಗಳಲ್ಲಿಯೂ ಜಾತಿ, ಧರ್ಮ, ರಾಜಕೀಯ ಭೇಧ ಕಾಣುವ ಇಂದಿನ ದಿನಗಳಲ್ಲಿ ಯಾವುದೇ ಭೇಧ ಭಾವ ಇಲ್ಲದ ಏಕ ಭಾರತವನ್ನು ಕ್ರೀಡೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ರಾಜ್ಯ ವಾಲಿಬಾಲ್ ಅಸೋಸಿಯೇಷನ್ನ ಅಸೋಸಿಯೇಟ್ ಸೆಕ್ರೆಟರಿ ಎನ್. ಜಯಪ್ರಕಾಶ್ ರೈ ಹೇಳಿದರು.
ಇತ್ತೀಚೆಗೆ ಅಗಲಿದ ಕೋಟಕ್ಕಲ್ ಆರ್ಯವೈದ್ಯ ಶಾಲಾದ ಪಿ.ವಿ. ಕುಂಞಿರಾಮನ್ ವೈದ್ಯರ್ ಸ್ಮರಣಾರ್ಥ ಸುಳ್ಯ ಪ್ರೆಸ್ಕ್ಲಬ್ನ ಶಟಲ್ ಬ್ಯಾಡ್ಮಿಂಟನ್ ಕ್ಲಬ್ನ ಸದಸ್ಯರಿಗಾಗಿ ಹಮ್ಮಿಕೊಂಡ ಶಟಲ್ ಬ್ಯಾಡ್ಮಿಂಟನ್ ಲೀಗ್ ಟೂರ್ನಮೆಂಟ್ನ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇಂದು ಮಿದುಳಿಗೆ ಕೆಲಸ ಹೆಚ್ಚಾಗಿರುವ ಸಂದರ್ಭದಲ್ಲಿ ದೈಹಿಕ ಶ್ರಮ ಕಡಿಮೆಯಾಗಿದೆ. ಇದು ದೈಹಿಕ ಮತ್ತು ಮಾನಸಿಕ ಅಸಮತೋಲನಕ್ಕೆ ಕಾರಣವಾಗಬಹುದು. ಆದುದರಿಂದ ಪ್ರತಿಯೊಬ್ಬರು ಯಾವುದಾದರು ಒಂದು ಕ್ರೀಡೆಯಲ್ಲಿ ಏರ್ಪಡುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ, ಪಂದ್ಯಾಕೂಟದ ಪ್ರಾಯೋಜಕರಾದ ಪ್ರಶಾಂತ್ಕುಮಾರ್ ಕೋಟಕ್ಕಲ್ ಮುಖ್ಯ ಅತಿಥಿಗಳಾಗಿದ್ದರು. ಪ್ರೆಸ್ಕ್ಲಬ್ನ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದ ನಿರ್ಣಾಯಕರಾದ ಸೈಫ್ ಹಳೆಗೇಟು ಹಾಗೂ ಶ್ರೇಯಸ್ ಹಳೆಗೇಟು, ಪ್ರೆಸ್ಕ್ಲಬ್ ಕೋಶಾಧಿಕಾರಿ ಈಶ್ವರ ವಾರಣಾಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.ಎನ್.ಜಯಪ್ರಕಾಶ್ ರೈ, ಅಬ್ದುಲ್ ರಹಿಮಾನ್ ಸಂಕೇಶ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು
ಪಂದ್ಯಾಟದ ವಿಜೇತರು:
ಪಿ.ವಿ.ಕುಂಞಿರಾಮನ್ ವೈದ್ಯರ್ ಸ್ಮರಣಾರ್ಥ ಸುಳ್ಯ ಪ್ರೆಸ್ಕ್ಲಬ್ನ ಶಟಲ್ ಬ್ಯಾಡ್ಮಿಂಟನ್ ಕ್ಲಬ್ನ ಸದಸ್ಯರಿಗಾಗಿ ಹಮ್ಮಿಕೊಂಡ ಶಟಲ್ ಬ್ಯಾಡ್ಮಿಂಟನ್ ಲೀಗ್ ಟೂರ್ನಮೆಂಟ್ನಲ್ಲಿ ಪ್ರಥಮ ಬಹುಮಾನ ಶ್ರೀಧರ ಕಜೆಗದ್ದೆ-ಶಫೀಕ್ ಜಯನಗರ ತಂಡ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಸತೀಶ್ ಹೊದ್ದೆಟ್ಟಿ-ಕೌಶಿಕ್ ತಂಡ, ತೃತೀಯ ಸ್ಥಾನವನ್ನು ಅನಿಲ್ ಕಳಂಜ-ಶಿವಪ್ರಸಾದ್ ಕೇರ್ಪಳ ತಂಡ, ಚತುರ್ಥ ಸ್ಥಾನವನ್ನು ಪ್ರಶಾಂತ್ ಕೋಟಕ್ಕಲ್-ಈಶ್ವರ ವಾರಣಾಸಿ ತಂಡ ಪಡೆದುಕೊಂಡಿತು. ಲೀಗ್ ಮಾದರಿಯ ಪಂದ್ಯಾಟದಲ್ಲಿ 6 ತಂಡಗಳು ಭಾಗವಹಿಸಿದ್ದವು.