
ಅಕ್ರಮವಾಗಿ ಗೋವು ಸಾಗಾಟ: ಕಾರು ಸಹಿತ ಗೋವುಗಳು ವಶ, ಆರೋಪಿಗಳು ಪರಾರಿ
ಕುಂದಾಪುರ: ಹಿಂಸಾತ್ಮಕವಾಗಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಕೃತ್ಯವೊಂದನ್ನು ಬೈಂದೂರು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆ ತಿರುವಿನಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಇಬ್ಬರು ಆರೋಪಿಗಳು ಪೊಲೀಸ್ ದರ್ಶನವಾದೊಡನೆ ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಜು.7 ರಂದು ಬೆಳಗ್ಗೆ ಬೈಂದೂರು ಪೊಲೀಸ್ ಉಪನಿರೀಕ್ಷಕ ನವೀನ್ ಬೋರ್ಕರ್ ಅವರಿಗೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಒಂದು ಕೆಂಪು ಬಣ್ಣದ ಬ್ರೇಜಾ ಕಾರಿನಲ್ಲಿ ದನವನ್ನು ಕಳವು ಮಾಡಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ಒತ್ತಿನೆಣೆಯ ತಿರುವಿನಲ್ಲಿ ಬ್ಯಾರಿಕೇಡ್ ಹಾಕಿ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.
ಬೆಳಗ್ಗೆ ಸುಮಾರು ಆರು ಗಂಟೆ ವೇಳೆಗೆ ಬೈಂದೂರು ಕಡೆಯಿಂದ ಬಂದ ಒಂದು ಕೆಂಪು ಬಣ್ಣದ ಕೆಎ-47-ಎಂ-8960 ನಂಬ್ರದ ಬ್ರೇಜಾ ಕಾರನ್ನು ತಡೆದಾಗ ಚಾಲಕ ಕಾರನ್ನು ನಿಲ್ಲಿಸಿದಂತೆ ಮಾಡಿ ರಿವರ್ಸ್ ತೆಗದುಕೊಳ್ಳಲು ಪ್ರಯತ್ನಿಸಿದ. ಹಿಂದುಗಡೆ ವಾಹನ ಇದ್ದುದರಿಂದ ರಿವರ್ಸ್ ತೆಗದುಕೊಳ್ಳಲು ಅಗದೆ ಕಾರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಇಳಿದು ಓಡಿ ಹೋಗಿರುತ್ತಾರೆ.
ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಿದ್ದು, ಕಾರಿನ ಢಿಕ್ಕಿಯನ್ನು ತೆರೆದು ನೊಡಿದಾಗ ಯಾವುದೇ ಪರವಾನಿಗೆ ಪಡೆಯದೇ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೆ ಒಂದನ್ನು ಹಾಕಿ ಸಾಗಿಸುತ್ತಿರುವುದು ಕಂಡುಬಂತು. ಮಾಂಸ ಮಾಡುವ ಉದ್ದೇಶದಿಂದ ಇವುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಸಾಗಾಟ ಮಾಡಿರುವುದಾಗಿದೆ ಎಂದರಿವಾಯಿತು. ದನಗಳನ್ನು ರಕ್ಷಿಸಿದ ಪೊಲೀಸರು, ಕಾರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.