ಮಂಗಳೂರು: ರಸ್ತೆ ಅಪಘಾತದಲ್ಲಿ ಯುವಕನ ಸಾವು- ಆರೋಪಿಗೆ 6ತಿಂಗಳು ಜೈಲು, ದಂಡ
ಮಂಗಳೂರು: ರಸ್ತೆ ಅಪಘಾತಪಡಿಸಿ ಯುವಕನೊಬ್ಬನ ಸಾವಿಗೆ ಕಾರಣನಾದ ಆರೋಪಿ ಮೀನು ಸಾಗಾಟದ ಕಂಟೈನರ್ ಲಾರಿ ಚಾಲಕನಿಗೆ ಜೆಎಂಎಫ್ಸಿ 3ನೇ ನ್ಯಾಯಾಲಯವು 6ತಿಂಗಳು ಜೈಲು ಹಾಗೂ 9,500ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಿಲಖಂಡು ಅಬುಜಾರ್ ಕಾಲನಿ ನಿವಾಸಿ ಮೊಹಮ್ಮದ್ ಜಾಫರ್ ಸಾಬ್ (32) ಎಂಬಾತ 2019ರ ಸೆಪ್ಟೆಂಬರ್ 28ರಂದು ಮಧ್ಯಾಹ್ನ 12.20ರ ಸುಮಾರಿಗೆ ಕಂಟೈನರ್ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ. ಲಾರಿ ನಂತೂರಿನಿಂದ ಪಂಪ್ವೆಲ್ ಕಡೆಗೆ ಹಾದು ಹೋಗುತ್ತಿತ್ತು. ಅತಿವೇಗವಾಗಿ ಕಂಟೈನರ್ ಲಾರಿಯನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಈತ ಮಾನಸ್ ರಾಮನಾಥ್ ಉಗಲೆ ಎಂಬವರ ಸವಾರಿ ಮಾಡುತ್ತಿದ್ದ ಸೈಕಲ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅವರು ಸೈಕಲ್ ಸಹಿತ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಕಂಟೈನರ್ ಲಾರಿಯ ಎಡಬದಿಯ ಹಿಂಬದಿ ಚಕ್ರ ಮಾನಸ್ ರಾಮನಾಥ್ ಉಗಲೆ ತಲೆ ಮೇಲೆಯೇ ಹರಿದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಾಗಿ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮಂಗಳೂರಿನ ಮಾನ್ಯ ಜೆಎಂಎಫ್ಸಿ 3ನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ ಇ.ಎಸ್. ಆರೋಪಿ ತಪ್ಪಿತಸ್ಥನೆಂದು ಪರಿಗಣಿಸಿ ಆತನಿಗೆ 6ತಿಂಗಳು ಜೈಲು ವಾಸ ಹಾಗೂ 9500ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ವಾದ ಮಂಡಿಸಿದ್ದಾರೆ.