
ಅಖಿಲ ಭಾರತ ಕಾರ್ಮಿಕರ ಮುಷ್ಕರ,ಹಳೆ ಬಂದರು ಸಗಟು ಮಾರುಕಟ್ಟೆ ಸ್ತಬ್ದ
ಮಂಗಳೂರು: ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ಸಂಹಿತೆ ಜಾರಿಗೊಳಿಸುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಇಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ನೇತೃತ್ವದಲ್ಲಿ ಇಂದು ದೇಶದಾದ್ಯಂತ ಕಾರ್ಮಿಕರು ಹಮ್ಮಿಕೊಂಡಿದ್ದ ಅಖಿಲ ಕಾರ್ಮಿಕರ ಮುಷ್ಕರವನ್ನು ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರು ಬೆಂಬಲಿಸಿ ಯಾವುದೇ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳದೆ ಮುಷ್ಕರದಲ್ಲಿ ಭಾಗವಹಿಸಿದರು.
ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯದೆ ಬಿಕೋ ಎನ್ನುತ್ತಿತ್ತು. ಬಂದರು ಶ್ರಮಿಕರ ಸಂಘ ಹಳೇಬಂದರಿನ ಕಾರ್ಮಿಕರ ಮುಷ್ಕರದ ನೇತೃತ್ವವನ್ನು ವಹಿಸಿತ್ತು.
ಹಳೇಬಂದರಿನಲ್ಲಿ ಕಾರ್ಮಿಕರ ಮುಷ್ಕರ ಯಶಸ್ವಿ: ಬಿ.ಕೆ. ಇಮ್ತಿಯಾಜ್
ಅಖಿಲ ಭಾರತ ಕಾರ್ಮಿಕರ ಮುಷ್ಕರ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ ಎಂದು ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ತಿಳಿಸಿದ್ದಾರೆ.
ಹಳೇಬಂದರಿನ ಕಿರಾಣ, ಅಡಿಕೆ, ಒಣಮೀನು, ಟ್ರಾನ್ಸ್ ಪೋರ್ಟ್ ವಿಭಾಗದ ಕಾರ್ಮಿಕರು, ಸರಕು ಸಾಗಾಟದ ಲಾರಿ ಚಾಲಕರು ಸೇರಿದಂತೆ ಸಾವಿರಕ್ಕೂ ಅಧಿಕ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿದ್ದಾರೆ ಎಂದು ಅವರು ತಿಳಿಸಿದರು.
ಮುಷ್ಕರದಲ್ಲಿ ಭಾಗವಹಿಸಿದ ಕಾರ್ಮಿಕರು ಪೋರ್ಟ್ ರಸ್ತೆ, ಜೆ.ಎಂ. ರಸ್ತೆ, ವರ್ತಕ ವಿಳಾಸ, ಚೇಂಬರ್ ರಸ್ತೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.
ಬಂದರು ಶ್ರಮಿಕರ ಸಂಘದ ಮುಖಂಡರಾದ ಬಿ.ಕೆ. ಇಮ್ತಿಯಾಜ್, ಫಾರೂಕ್ ಉಳ್ಳಾಲಬೈಲ್, ಲೋಕೇಶ್ ಶೆಟ್ಟಿ, ಮಜೀದ್ ಉಳ್ಳಾಲ, ಮೋಹನ, ಹರೀಶ್ ಕೆರೆಬೈಲ್, ಸಿದ್ದಿಕ್ ಬೆಂಗ್ರೆ, ಕಾಜ ಮೋಹಿಯುದ್ದಿನ್, ಪದ್ಮನಾಭ, ಪ್ರಭಾಕರ, ಸಿರಾಜ್, ಇಕ್ಬಾಲ್, ಬಸವ, ಅಬ್ದುಲ್ ಖಾದರ್ ಬಜಾಲ್, ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.