
ವೈದ್ಯರು ನಿಸ್ವಾರ್ಥ ಸಮರ್ಪಣ ಭಾವದವರು: ಪ್ರೊ. ಡಾ. ಲಕ್ಷ್ಮೀನಾರಾಯಣ ಸಾಮಗ
ಮಂಗಳೂರು: ವೈದ್ಯೋ ನಾರಾಯಣ ಹರಿಃ ಎಂಬ ಮಾತಿನಂತೆ ವೈದ್ಯರು ತನ್ನದೇ ಆದ ಶಿಸ್ತಿನಿಂದ ಸಮಾಜದ ಸೇವೆಯೇ ಸರ್ವಜ್ಞನ ಸೇವೆ ಎಂದು ಕಾರ್ಯನಿರ್ವಹಿಸುವವರು ನಿಸ್ಪಾರ್ಥ, ಸಮರ್ಪಣ ಭಾವದವರು. ನಿಧಾನಗತಿಯ ಯಶಸ್ಸು ಮನುಷ್ಯನನ್ನು ಸಾಧನೆಯ ಉತ್ತುಂಗಕ್ಕೇರಿಸುತ್ತದೆ ಎಂದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೆಡಿಸಿನ್ ವಿಭಾಗದ ಘಟಕ ಮುಖ್ಯಸ್ಥ ಪ್ರೊ. ಡಾ. ಲಕ್ಷ್ಮೀನಾರಾಯಣ ಸಾಮಗ ಹೇಳಿದರು.
ಅವರು ಇಂದು ನಿಟ್ಟೆ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ನಡೆದ ವೈದ್ಯರದಿನ ಮತ್ತು ಪತ್ರಿಕಾದಿನ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಪತ್ರಿಕೆಯು ಪತ್ರಕರ್ತನ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಜನರಿಗೆ ಸತ್ಯ ಸುದ್ದಿ ತಲುಪಿಸುವ ನೆಲೆಯಿಂದ ಪತ್ರಿಕೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ. ಡಾ ಸಂದೀಪ್ ರೈ ಅವರು ವಿದ್ಯಾರ್ಥಿಗಳು ನಿರಂತರ ಶ್ರದ್ಧೆಯಿಂದ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಡಾ. ಕೆಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಸಾಯಿಗೀತಾ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದ ಕುರಿತು ಮಾಹಿತಿಗಳನ್ನು ವಿದ್ಯಾರ್ಥಿನಿಯರೊಂದಿಗೆ ಹಂಚಿಕೊಂಡರು. ಮಂಚಿ ಸರಕಾರಿ ಫ್ರೌಡಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿಟ್ಲ, ಮಂಚಿ ಸರಕಾರಿ ಫ್ರೌಡಶಾಲೆಯ ವಿದ್ಯಾರ್ಥಿನಿಯರು, ವಿದ್ವಾಂಸರಾದ ಚಂದ್ರಕಲಾ ನಂದಾವರ, ಅನುವಾದಕರ ತಂಡದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂಚಿ ಫ್ರೌಡಶಾಲಾ ಶಿಕ್ಷಕಿ ವಿಜಯಲಕ್ಷ್ಮೀ ನಿರೂಪಿಸಿದರು. ನಿಟ್ಟೆ ಕೆಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಯೋಜನಾ ಸಹಾಯಕಿ ಶ್ರುತಿ ಅಮೀನ್ ಕೆ ವಂದಿಸಿದರು.