
ಕಾಂಗ್ರೇಸಿಗರು ನನ್ನ ಟಾರ್ಗೆಟ್ ಮಾಡಿ ನಿಂದನೆ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಕೋಟ್ಯಾನ್
ಮೂಡುಬಿದಿರೆ: ಸಮಿತ್ರಾಜ್ ದರೆಗುಡ್ಡೆ ಪ್ರಕರಣದ ಕುರಿತಂತೆ ಕಾಂಗ್ರೇಸಿಗರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸಿಗರು ನನ್ನನ್ನು ಟಾರ್ಗೆಟ್ ಮಾಡಿ ನಿಂದಿಸಿದ್ದು ಮುಂದೆ ಇಂತಹ ದುವರ್ತನೆ ಮಾಡಿದರೆ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಶಾಸಕ ಉಮಾನಾಥ್ ಎ. ಕೋಟ್ಯಾನ್ ಎಚ್ಚರಿಕೆ ನೀಡಿದ್ದಾರೆ.
ಅವರು ಮೂಡುಬಿದಿರೆ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.
ಕಾಂಗ್ರೇಸಿಗರು ಮಂಗಳವಾರ ಮೂಡುಬಿದಿರೆಯ ರಾಜೀವ್ ಗಾಂಧಿ ಸಂಕೀರ್ಣದ ಮುಂಭಾಗದಲ್ಲಿ ಸಮಿತ್ ರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನೀಡುವಂತೆ ಆಗ್ರಹಿಸುವ ನೆಪದಲ್ಲಿ ಪ್ರತಿಭಟನೆ ನಡೆಸಿ ತನ್ನನ್ನು ಸುಮ್ಮನೆ ಮಧ್ಯಕ್ಕೆ ತರುತ್ತಿದ್ದಾರೆಂದು ಆರೋಪಿಸಿದರು.
ಎಸ್ಐಟಿ ಕೊಡಲು ನನ್ನ ಸಂಪೂರ್ಣ ಬೆಂಬಲ ಇದೆ. ನಿಮ್ಮದೇ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುವಾಗ ಎಸ್ಐಟಿ ನೀಡುವಂತೆ ಒತ್ತಾಯಿಸುವುದೇನು? ನೀವು ಎಸ್ಐಟಿಗಾದರೂ ಕೊಡಿ ಸಿಬಿಐ ಅಥವಾ ಎನ್ಐಎಗಾದರೂ ಕೊಡಿ ಕೆಟ್ಟ ಕೆಲಸ ಯಾರೇ ಮಾಡಿದರು ನಾನು ಅವರಿಗೆ ಸಪೋರ್ಟ್ ಮಾಡುವುದಿಲ್ಲ. ಆದರೆ ಬಿಜೆಪಿ ಅಥವಾ ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ಅನ್ಯಾಯವಾಗಿ ತೊಂದರೆಕೊಟ್ಟರೆ ನಾನು ಶಾಸಕನಾಗಿ ಸುಮ್ಮನಿರಲು ಸಾಧ್ಯವಿಲ್ಲ. ಸಮಿತ್ರಾಜ್ ಈ ಹಿಂದೆ ಮೂಡುಬಿದಿರೆ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ದಿನೇಶ್ ಕುಮಾರ್ರಿಂದ ಅನ್ಯಾಯವಾಗಿ ಬಂಧನಕ್ಕೊಳಗಾದಾಗ ತಾನು ಸ್ಟೇಷನ್ಗೆ ವಕೀಲರೊಂದಿಗೆ ತೆರಳಿ ಜಾಮೀನು ಪತ್ರ ತೋರಿಸಿ ಕಾನೂನು ರೀತಿಯಲ್ಲಿ ಬಿಡುಗಡೆ ಮಾಡಿದ್ದೇನೆ. ಅನ್ಯಾಯ ಯಾರೇ ಮಾಡಿದರು ಬೆಂಬಲ ನೀಡಲಾರೆ. ನನ್ನ ಕ್ಷೇತ್ರದ ಮತದಾರರ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ ನಾನು ಪರಿಶುದ್ದವಾಗಿದ್ದೇನೆ ಎಂದು ಅವರು ಹೇಳಿದರು.
ನನಗೆ ಬಿಲ್ಲವ, ಬಂಟ ಎಂದು ಯಾರು ಇಲ್ಲ. ಸಾಮಾನ್ಯರಂತೆ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ ಅವರು ಅಭಯಚಂದ್ರರ ಬಗ್ಗೆ ಗೌರವ ನೀಡುತ್ತಾ ಬಂದಿದ್ದೇನೆ. ಆದರೆ ಪ್ರತಿಭಟನೆಯಲ್ಲಿ ಆವೇಶ ಭರಿತವಾಗಿ ಮಾತನಾಡುತ್ತಾ ಮೂಡುಬಿದಿರೆಯಲ್ಲಿ ನನ್ನಷ್ಟು ದೊಡ್ಡ ರೌಡಿ ಯಾರಿದ್ದಾರೆ ಎಂದು ಅವರೇ ಹೇಳಿದ್ದಾರೆ. ಅವರು ರೌಡಿಯಾಗಿಯೇ ಮುಂದುವರಿಯಲಿ ನಾನಂತೂ ರೌಡಿಯಾಗುವ ಆಶಯ ಹೊಂದಿಲ್ಲ ಎಂದು ಹೇಳಿದರು.
ಮಂಗಳೂರಿನ ಕಾಲೇಜೊಂದರ ಮುಂಭಾಗದಲ್ಲಿ ಪಬ್ಬು ನಡೆಸಿ ಹೆಣ್ಣು ಮಕ್ಕಳನ್ನ ಕುಣಿಸುವ ಮಿಥುನ್ ರೈ ಮೂಡುಬಿದಿರೆಯಲ್ಲಿ ಸಾಚಾ ಎಂಬಂತೆ ನಡೆಸುವುದು ಎಷ್ಟು ಸರಿ. ಕಾರಿನಲ್ಲಿ ಬರುವಾಗ ನಾಲ್ಕೈದು ಮಂದಿಯನ್ನು ಕೂರಿಸಿಕೊಂಡು ನೀವು ಸುತ್ತಾಡಿದಂತೆ ನನಗೆ ಸುತ್ತಾಡುವ ಅವಶ್ಯಕತೆಯಿಲ್ಲ. ನಿಮ್ಮ ರೌಡಿಗಳಂತೆ ನಾನು ಪೋಸು ನೀಡಲಾರೆ ಎಂದು ಕೋಟ್ಯಾನ್ ತಿಳಿಸಿದರು.
ಜಿಲ್ಲೆಯಲ್ಲಿ ಮರಳು, ಕಲ್ಲು ಸ್ಥಗಿತಗೊಳಿಸಿ ಈ ಸರಕಾರ ಜನರಿಗೆ ತೊಂದರೆ ಕೊಡುತ್ತಿದೆ. ಇದೀಗ ಅಲ್ಪಸಂಖ್ಯಾತರು ಕಾಂಗ್ರೆಸ್ನವರೇ ಉಮಾನಾಥ ಕೋಟ್ಯಾನ್ ಬಿಜೆಪಿ ಸರಕಾರ ಇರುವಾಗ ನಮಗೇನು ತೊಂದರೆ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಕಿನ್ನಿಗೋಳಿಯಲ್ಲಿ 70 ವರ್ಷದ ಕಾಂಗ್ರೆಸಿಗ ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ಮಾಡಿ ಪೋಕ್ಸೋ ಎದುರಿಸುತ್ತಿದ್ದಾನೆ. ಅವನನ್ನು ನಿಮ್ಮ ಬಂಟ ಎಂದು ಹೇಳಲೇ? ಎಂದು ಪ್ರಶ್ನಿಸಿದರು.
ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್, ಸುನಿಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ನಗರಾಧ್ಯಕ್ಷ ಲಕ್ಷ್ಮಣ ಪೂಜಾರಿ, ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.