
ರೈತರಿಗೆ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ
ಪುತ್ತೂರು: 15 ವರ್ಷದಿಂದ ಚಾಲ್ತಿ ಇರದ ಖಾತೆಯ ಹಣ ಆರ್ಬಿಐಗೆ ಹೋಗುತ್ತದೆ. ಆ ಬಳಿಕವೂ ಖಾತೆದಾರರು ಅರ್ಜಿ ನೀಡಿ ಹಣ ಹಿಂಡೆಯಲು ಅವಕಾಶಗಳಿದೆ ಎಂದು ಸೀನಿಯರ್ ಬ್ಯಾಂಕ್ ಮೆನೇಜರ್ ನವನೀತ್ ಹೇಳಿದರು.
ಪುತ್ತೂರು ಎಸ್ಕೆಎಎಂಎಸ್ ಕಟ್ಟಡದಲ್ಲಿರುವ ರೈತ ಸಂಘದ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಕೆನರಾ ಬ್ಯಾಂಕಿನಿಂದ ರೈತರಿಗೆ ವಿವಿಧ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಹಕರು ಒಟಿಪಿ ಅಥವಾ ಲಿಂಕ್ ಬಳಸಿ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ. ವಿಮಾ ಸವಲತ್ತುಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಕೆನರಾ ಬ್ಯಾಂಕಿನಿಂದ ವಿವಿಧ ಸವಲತ್ತುಗಳಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಅವರು ಮಾತನಾಡಿ, ಬ್ಯಾಂಕಿನಲ್ಲಿ ನಗುಮುಖದ ಸೇವೆಯನ್ನು ನೀಡಬೇಕು. ರೈತರನ್ನು ಹೆಚ್ಚು ಅಲೆದಾಡಿಸದೆ, ಸೂಕ್ತ ಮಾಹಿತಿಯನ್ನು ನೀಡಬೇಕು. ಸಾಲವನ್ನು ಮರುಪಾವತಿಗೆ ಬರುವ ಸಂದರ್ಭವೂ ಅಗತ್ಯ ವ್ಯವಸ್ಥೆಯನ್ನು ಮಾಡಬೇಕು. ಒನ್ ಟೈಮ್ ಸೆಟಲ್ನವರಿಗೆ ವಿಶೇಷ ರಿಯಾಯಿತಿ ನೀಡಬೇಕು ಎಂದು ಹೇಳಿದರು.
ರೈತಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರು ಮಾತನಾಡಿ, ರೈತರು ಹೋದಾಗ ಬ್ಯಾಂಕಿನ ಶಾಖೆಗಳಲ್ಲಿ ಸತಾಯಿಸುತ್ತಾರೆ. ಅಧಿಕಾರಿಗಳು ಸೌಲಭ್ಯಗಳ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಸಾಲ ಮರು ಪಾವತಿಯ ಬಳಿಕ ಜಾಗದ ಮೂಲ ದಾಖಲೆಗಳನ್ನು ಸರಿಯಾಗಿ ನೀಡಲು ವ್ಯವಸ್ಥೆ ಮಾಡಬೇಕು ಎಂದರು.
ರೈತರಿಗೆ ಬ್ಯಾಂಕ್ ಸಾಲಗಳ, ಮುದ್ರಾಯೋಜನೆ, ಕುರಿ, ಕೋಳಿ, ಹಂದಿ, ಪಶು ಸಾಕಾಣಿಕೆಗೆ ಬ್ಯಾಂಕಿನ ಆರ್ಥಿಕ ನೆರವಿನ ಬಗ್ಗೆ ಮಾಹಿತಿ ನೀಡಿದರು.
ಸೀನಿಯರ್ ಮೆನೇಜರ್ ನವನೀತ್, ಸುರೇಶ್, ಸತೀಶ್, ಮ್ಯಾನೇಜರ್ ಕೃಷ್ಣ ರಾಜ್, ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ರಾಮಣ್ಣ ಪಾಳಿಗೆ ಮೊದಲಾದವರು ಉಪಸ್ಥಿತರಿದ್ದರು.