
ಹೆಚ್ಚಿದ ಚಿರತೆಗಳ ಉಪಟಳ: ಗಡಿ ಪ್ರದೇಶದಲ್ಲಿ ಹೆಚ್ಚಿದ ಆತಂಕ
ಸುಳ್ಯ: ಗಡಿ ಪ್ರದೇಶವಾದ ಪನತ್ತಡಿ ಗ್ರಾಮದ ಕಲ್ಲಪಳ್ಳಿಯ ವಿವಿಧ ಭಾಗಗಳಲ್ಲಿ ಚಿರತೆ, ಹುಲಿಗಳ ಕಾಟ ಹೆಚ್ಚಾಗಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕಲ್ಲಪಳ್ಳಿಯ ಬೀರುದಂಡು, ಆನೆಗುಂಡಿ, ಮಾಂಬಳ, ರಂಗತ್ತಮಲೆ, ದೊಡ್ಡಮನೆ ಮತ್ತಿತರ ಕಾಡಂಚಿನ ಭಾಗಗಳಲ್ಲಿ ಹುಲಿ, ಚಿರತೆಗಳ ಉಪಟಳ ಹೆಚ್ಟಾಗಿದೆ. ಇಲ್ಲಿ ಮನೆಗಳಿಂದ ಸಾಕು ನಾಯಿ, ದನ ಕರುಗಳ ಮೇಲೆ ಚಿರತೆ, ಹುಲಿ ದಾಳಿ ಮಾಡಿ ಸಾಕು ಪ್ರಾಣಿಗಳನ್ನು ಹೊತ್ತೊಯ್ಯುವುದು, ಅವುಗಳನ್ನು ಕೊಂದು ಹಾಕುವುದು ಕಂಡು ಬಂದಿದೆ.
ಹಲವು ತಿಂಗಳಿನಿಂದ ಈ ರೀತಿ ಚಿರತೆಗಳ ಉಪಟಳ ಕಂಡು ಬಂದಿದೆ. ಬೀರುದಂಡು ಪ್ರದೇಶದಲ್ಲಿ ಹುಲಿ ಚಿರತೆಗಳ ಉಪಟಳ ಅತೀ ಹೆಚ್ಚು ಕಂಡು ಬಂದಿದೆ. ಬೀರುದಂಡಿನ ಕೆಲವು ಮನೆಗಳಿಂದ ಸಾಕು ನಾಯಿ ನಾಯಿಗಳನ್ನು ಹೊತ್ತೊಯ್ದಿದೆ. ಆನೆಗುಂಡಿ ಭಾಗದಲ್ಲಿ ಕೆಲವು ಮನೆಗಳ ನಾಯಿಗಳ ಮೇಲೆ ದಾಳಿ ಮಾಡಿದರೆ, ಕೆಲವು ಮನೆಗಳಿಂದ ಕೋಳಿಗಳನ್ನು ಹೊತ್ತೊಯ್ದಿದೆ. ಹಲವು ಮನೆಗಳಿಂದ ನಾಯಿ, ಕೋಳಿಗಳು ನಾಪತ್ತೆಯಾಗಿದೆ. ಕೆಲವು ಕಡೆ ದನ ಕರುಗಳ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಜನ ಪ್ರತಿನಿಧಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಸೂಚಿಸಿದ್ದಾರೆ.
ಕಲ್ಲಪ್ಪಳ್ಳಿಯ ಬೀರುದಂಡು ಪ್ರದೇಶದಲ್ಲಿ ಚಿರತೆ, ಹುಲಿ ಹಾವಳಿ ವಿಪರೀತ ಆಗಿದ್ದು, ಮನೆಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಪ್ರತಿ ದಿವಸ ಹುಲಿ, ಚಿರತೆಗಳು ದಾಳಿ ಮಾಡುತ್ತಿವೆ, ಹಲವು ಮನೆಗಳಿಂದ ನಾಯಿ ಕೋಳಿ ಇನ್ನಿತರ ಸಾಕು ಪ್ರಾಣಿಗಳು ನಾಪತ್ತೆ ಆಗಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಕಾಡಾನೆ, ಮಂಗಗಳು, ಕಾಡು ಹಂದಿಗಳ ಉಪಟಳವೂ ಹೆಚ್ಚಿದೆ.
ಹುಲಿ, ಚಿರತೆ ಹಾವಳಿ ತಡೆಯಲು ಮತ್ತು ಜನರ ಆತಂಕ ದೂರ ಮಾಡಲು ಅರಣ್ಯ ಇಲಾಖೆ, ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.