ದ.ಕ. ಜಿಲ್ಲೆಗೆ 2 ದಿನ ಆರೇಂಜ್ ಅಲರ್ಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆ ಚುರುಕುಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಮಂಗಳವಾರ ಮಧ್ಯಾಹ್ನದವರೆಗೆ ಇದ್ದ ಬಿಸಿಲು ಬಳಿಕ ಮಾಯವಾಗಿ ಮಧ್ಯಾಹ್ನದ ನಂತರ ಮಳೆ ಶುರುವಾಗಿದೆ.
ಜಿಲ್ಲೆಗೆ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಆರೆಂಜ್ ಅಲರ್ಟ್ನ್ನು ಹವಾಮಾನ ಇಲಾಖೆ ನೀಡಿದೆ. ಅದರ ಬಳಿಕ ಹಳದಿ ಅಲರ್ಟ್ ನೀಡಲಾಗಿದೆ. ಮಂಗಳವಾರ ರಾತ್ರಿ ವೇಳೆಗೆ ಗ್ರಾಮಾಂತರ ಭಾಗದಲ್ಲಿ ನಿರಂತರವಾಗಿ ಉತ್ತಮ ಮಳೆಯಾಗಿದ್ದು ಚಳಿಗಾಳಿ ಕೂಡ ಇತ್ತು. ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ ಕೇವಲ 2 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಮಳೆಯ ಮುನ್ಸೂಚನೆ:
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮುಂದಿನ 2 ದಿನ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ಮಳೆಯ ಮುನ್ಸೂಚನೆ ಇದೆ. ಕೆಲವು ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆ ಇರಬಹುದು. ದಕ್ಷಿಣ ಕೇರಳ ಕರಾವಳಿಯಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿಯು ಕರಾವಳಿ ತೀರದಲ್ಲೇ ಉತ್ತರಕ್ಕೆ ಚಲಿಸಲಿದ್ದು 24 ಗಂಟೆಯೊಳಗೆ ಉಡುಪಿ ಜಿಲ್ಲೆಯ ತನಕ ಚಲಿಸಿ ಶಿಥಿಲಗೊಳ್ಳುವ ಸಾಧ್ಯತೆಗಳಿವೆ . ಈಗಿನಂತೆ ಆಗಸ್ಟ್ 6ರಂದು ಮಾತ್ರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಮಳೆ ಸ್ವಲ್ಪ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆಗಸ್ಟ್ 14ರ ನಂತರ ಮಳೆಯ ಸಾಧ್ಯತೆ ಕಡಿಮೆ:
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ. ಈ ಭಾಗಗಳಲ್ಲಿ ಆಗಸ್ಟ್ 14ರ ನಂತರ ಮಳೆಯ ಸಾಧ್ಯತೆ ಕಡಿಮೆ. ಬಂಗಾಳಕೊಲ್ಲಿಯಲ್ಲಿ ಅಥವಾ ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ಗಾಳಿಯ ತಿರುಗುವಿಕೆ, ವಾಯುಭಾರ ಕುಸಿತದಂತಹ ವಿದ್ಯಮಾನಗಳು ಉಂಟಾದರೆ ಮಾತ್ರ ಮಳೆಯಾಗುವ ಸಧ್ಯತೆ ಹೆಚ್ಚು. ಮುಂಗಾರು ದುರ್ಬಲಗೊಳ್ಳಲು ಫೆಸಿಫಿಕ್ ಸಾಗರದಲ್ಲಿ ಮೇಲಿಂದ ಮೇಲೆ ಉಂಟಾಗುವ ಪ್ರಭಲ ಭೂಕಂಪನಗಳು ಹಾಗೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ನ ಪೂರ್ವ ಕರಾವಳಿಯಿಂದ ಹಿಡಿದು ಜಪಾನ್, ರಶ್ಯಾ ತನಕವೂ ಅಲ್ಲಲ್ಲಿ ಉದ್ಭವಿಸುತ್ತಿರುವ ಜ್ವಾಲಾಮುಖಿಗಳ ಪ್ರಭಾವವೂ ಕಾರಣವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.