
ಆರೋಗ್ಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ವರ್ಣ ಚಿಕಿತ್ಸೆ: ಗೋಪಾಲಕೃಷ್ಣ ದೇಲಂಪಾಡಿ
Monday, August 11, 2025
ಮಂಗಳೂರು: ಬಣ್ಣಗಳು ನಮ್ಮ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತವೆ. ಕಣ್ಣಿನಿಂದಷ್ಟೇ ಕಾಣಬಹುದಾದ ಬಣ್ಣಗಳನ್ನು ಚರ್ಮ, ಮನಸ್ಸುಗಳೂ ಹೀರಿಯೇ ಹೀರುತ್ತವೆ. ಇನ್ನು, ನಮ್ಮ ದೇಹದೊಳಗಿರುವ ಏಳು ಯೋಗಚಕ್ರಗಳಿಗೂ ನಿರ್ದಿಷ್ಟ ಬಣ್ಣಗಳು ಹೊಂದಿಕೊಂಡಿವೆ. ಈ ಯೋಗಚಕ್ರಗಳು ಚೈತನ್ಯವಾಹಕಗಳಾಗಿದ್ದು, ಪ್ರಕೃತಿಯಲ್ಲಿನ ತರಂಗಗಳನ್ನು ಸಂಗ್ರಹಿಸಿ ದೇಹದ ನಾಡಿ, ಧಮನಿ, ಶಿರಸ್ಸಿಗೆ ತಲುಪಿಸುತ್ತವೆ ಎಂದು ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು.
ಅವರು ಆ.9 ರಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವರ್ಣ ಚಿಕಿತ್ಸೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಹೊರಗಿನಿಂದ ನಾವು ನೋಡುವ ಬಣ್ಣಗಳು ನಿರ್ದಿಷ್ಟ ಚಕ್ರಗಳ ಮೇಲೆ ನೇರ ಪರಿಣಾಮ ಬೀರಿ ನಮ್ಮ ದೇಹ ಮನಸ್ಸುಗಳ ಆರೋಗ್ಯದಲ್ಲಿ ಪಾತ್ರ ವಹಿಸುತ್ತದೆ. ಈ ರೀತಿಯ ಪ್ರಕ್ರಿಯೆಯೇ ಬಣ್ಣ ಚಿಕಿತ್ಸೆ ಆಗಿದೆ. ಸೃಷ್ಟಿಯೆಂಬ ಈ ಸೋಜಿಗದಲ್ಲೇ ಸಪ್ತವರ್ಣಗಳೂ ಸೃಷ್ಟಿಯಾಗಿವೆ. ಹಾಗಿದ್ದರೆ ಬಣ್ಣದ ಇತಿಹಾಸ ಸೃಷ್ಟಿಯ ಇತಿಹಾಸದೊಂದಿಗೆ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬಣ್ಣ ಚಿಕಿತ್ಸೆ ಎಂಬ ಪರಿಕಲ್ಪನೆಯೂ ಆಗಲೇ ಆರಂಭಗೊಂಡಿದೆ ಎಂದ ಅವರು ಅಧಿಕೃತವಾಗಿ ಬಹಳ ಹಿಂದೆಯೇ ಬಣ್ಣ ಚಿಕಿತ್ಸೆ ರೂಪುಗೊಂಡಿತ್ತು ಮತ್ತು ಪ್ರಸ್ತುತ ಅದು ಅತ್ಯಂತ ಜನಪ್ರಿಯಗೊಳ್ಳುತ್ತಿದೆ ಎನ್ನುವುದಂತೂ ಸತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರುಗಳಾದ ಭಾರತಿ ಎಸ್. ಪೈ, ನೀನಾ ಪೈ ಸಹಕರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಅಪರ್ಣ ಆಳ್ವ ಎಸ್. ಸ್ವಾಗತಿಸಿ, ಶುಭ ಕೆ.ಹೆಚ್. ವಂದಿಸಿದರು.