ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಪದವಿ ಕಾಲೇಜ್ನಲ್ಲಿ 1991ರಲ್ಲಿ ಬಿಎಸ್ಸಿ ಪದವಿ ಪಡೆದ ವಿದ್ಯಾರ್ಥಿಗಳು ಭಾನುವಾರ ಕಾಲೇಜ್ನಲ್ಲಿ ಮತ್ತೊಮ್ಮೆ ಜೊತೆ ಸೇರಿ ಕುಶಲೋಪರಿ ನಡೆಸಿದರು. ಬರೋಬ್ಬರಿ 34 ವರ್ಷಗಳ ಬಳಿಗೆ ಜೊತೆ ಸೇರಿದ ಸುಮಾರು 34 ಮಂದಿ ತಮ್ಮ ಕಾಲೇಜು ಜೀವನದ ಬಗ್ಗೆ ಮುಂದಿನ ಬದುಕಿನ ಏರು ಪೇರುಗಳ ಕುರಿತು ಚರ್ಚೆ, ಸಂವಾದ ನಡೆಸಿದರು.
ಈ ಕಾಲೇಜ್ನಲ್ಲಿ 1988ರಿಂದ 1991ರ ತನಕ 54 ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತು ಬಿಎಸ್ಸಿ ವ್ಯಾಸಂಗ ನಡೆಸಿದ್ದರು. ಬಳಿಕ ವಿವಿಧ ಉದ್ಯೋಗಳನ್ನು ಅರಸಿಕೊಂಡು ದೂರವಾಗಿದ್ದರು. ಇದೀಗ ಮತ್ತೊಮ್ಮೆ ತಾವು ಕಲಿತ ಕಾಲೇಜ್ನಲ್ಲಿ ಒಟ್ಟು ಸೇರಿ ಹರಟೆ ಸಂವಾದ ನಡೆಸಿ ಕಾಲೇಜ್ ಜೀವನವನ್ನು ನೆನಪಿಸಿಕೊಂಡರು. 54 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಮೂವರು ಮೃತಪಟ್ಟಿದ್ದಾರೆ. ಉಳಿದಂತೆ 51 ಮಂದಿಯಲ್ಲಿ 34 ಮಂದಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣವಾದ ವಾಟ್ಸಪ್ ಇವರೆಲ್ಲರೂ ಒಟ್ಟಾಗುವುದಕ್ಕೆ ಸಾಥ್ ನೀಡಿದೆ. ಮೊದಲಿಗೆ ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಒಟ್ಟಾದ ಗೆಳೆಯರು ಬಳಿಕ ಕಾಲೇಜ್ನಲ್ಲಿ ಸೇರುವ ತೀರ್ಮಾನ ನಡೆಸಿದ್ದರು. ಈ ಬಗ್ಗ ಕಾಲೇಜಿನ ಪ್ರಾಂಶುಪಾಲರಲ್ಲಿ ವಿಚಾರ ತಿಳಿಸಿದಾಗ ಅವರು ಸೇರ್ಪಡೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದರು.
ಜವಾಬ್ದಾರಿಯುತ ನಾಗರಿಕರ ತಯಾರಿ ಕಾಲೇಜಿನ ಆಸ್ತಿ: ಡಾ. ಆಂಟನಿ ಪ್ರಕಾಶ್ ಮೊಂತೆರೋ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಸಂತ ಫಿಲೋಮಿನಾ ಕಾಲೇಜ್ ಜವಾಬ್ದಾರಿಯುತ ನಾಗರಿಕರನ್ನು ತಯಾರಿ ಮಾಡುತ್ತಿದ್ದು, ಅದೇ ಈ ಕಾಲೇಜಿನ ಆಸ್ತಿಯಾಗಿದೆ. ಇಲ್ಲಿ ಸರ್ವ ಧರ್ಮ ಸಮಭಾವನ್ನು ಕಾಯಾ ವಾಚಾ ಮನಸಾ ಪಾಲಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿಗಳು ಅವರಲ್ಲಿ ಬೇಧವಿಲ್ಲ ಎಂದರು.
ಕಾಲೇಜ್ನ ಹಳೆ ವಿದ್ಯಾರ್ಥಿಗಳು ಸಹಮಿಲನದ ಹೆಸರಿನಲ್ಲಿ ಅದೇ ಕಾಲೇಜ್ನಲ್ಲಿ ಸೇರಿಕೊಂಡು ಮಾತುಕತೆ ನಡೆಸುವುದು ಖುಷಿಯ ವಿಚಾರವಾಗಿದೆ. ಕಾಲೇಜ್ನ ಬಗ್ಗೆ ಉತ್ತಮ ಅಭಿಪ್ರಾಯ ಉಳಿಸಿಕೊಂಡು, ಅದಕ್ಕೆ ಪೂರಕವಾಗಿ ಸ್ಪಂಧಿಸುವ ಸದಾಶಯ ಎಲ್ಲಾ ಹಳೆ ವಿದ್ಯಾರ್ಥಿಗಳಲ್ಲಿ ಮೂಡಿ ಬರಬೇಕು ಎಂದ ಪ್ರಾಂಶುಪಾಲರು ತಾನೂ ಈ ಕಾಲೇಜ್ನ ಹಳೆ ವಿದ್ಯಾರ್ಥಿಯಾಗಿ ಇದೀಗ ಶಿಕ್ಷಕನಾಗಿ, ಪ್ರಾಂಶುಪಾಲ ಆಗಿ ಕೆಲಸ ಮಾಡುತ್ತಿದ್ದೇನೆ. ಸುಧೀರ್ಘ 18 ವರ್ಷಗಳ ಕಾಲ ಇದೇ ಪರಿಸರದಲ್ಲಿ ಬದುಕಿದ್ದೇನೆ. ಈ ಕಾಲೇಜು ಬೆಳೆಯಲು ಇಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶಿಕ್ಷಕರು ಹಾಗೂ ಹೊಸತನಕ್ಕೆ ತೆರೆದುಕೊಂಡಿರುವ ಕಾಲೇಜ್ನ ಶೈಕ್ಷಣಿಕ ವ್ಯವಸ್ಥೆಯಾಗಿದೆ ಎಂದು ಹೇಳಿದರು.
ಕಾಲೇಜ್ನ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವು ನಡೆಯುತ್ತಿರುವುದು ಉತ್ತಮ ವಿಚಾರವಾಗಿದ್ದು, ಸಂಸ್ಥೆಯ ಇನ್ನಷ್ಟು ಗಟ್ಟಿಯಾಗಲು ಹಳೆ ವಿದ್ಯಾರ್ಥಿಗಳಿಂದ ಇಂತಹ ಅನೇಕ ಸಮ್ಮಿಲನ ಕಾರ್ಯಕ್ರಮಗಳನ್ನು ಇಲ್ಲಿ ನಡೆಯುತ್ತಿರಬೇಕು. ನಾನು ಈ ಕಾಲೇಜ್ನ ಹಳೆ ವಿದ್ಯಾರ್ಥಿಯಾಗಿದ್ದು, ಕಾಲೇಜ್ ನಮಗೆ ಎಲ್ಲವನ್ನೂ ನೀಡಿದೆ. ಆದರೆ ನಾವು ಕಲಿತ ಕಾಲೇಜ್ಗೆ ಏನು ನೀಡಬಹುದು ಎಂಬ ಚಿಂತನೆ ನಮ್ಮಲ್ಲಿರಬೇಕು.
ನಮ್ಮ ಕೊಡುಗೆಯಿಂದ ಸಂಸ್ಥೆಯು ಇನ್ನಷ್ಟು ಬೆಳೆಯುತ್ತದೆ. ಕಾಲೇಜು ಎತ್ತರಕ್ಕೇರಲು ಹಳೆ ವಿದ್ಯಾರ್ಥಿಗಳು ಜೊತೆಗಿರಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜ್ನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೋ, ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮತ್ತು ಉಪನ್ಯಾಸಕಿ ಹಾಗೂ ಕಾಲೇಜ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಅವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.
ಹಳೆ ವಿದ್ಯಾರ್ಥಿಗಳಾದ ಡಾ. ಗಿರೀಶ್ ಭಟ್ ಅಜಕ್ಕಳ ಸ್ವಾಗತಿಸಿದರು. ವಿಷ್ಣು ಭಟ್ ವಂದಿಸಿದರು. ಡಾ. ಕೃಷ್ಣ ಪ್ರಭ ನಿರೂಪಿಸಿದರು. ಶಿವನಾಥ ರೈ ಮೇಗಿನ ಗುತ್ತು, ಬದ್ರುದ್ದೀನ್ ಮಾಣಿ, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಹಾಗೂ ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ತೇಜಸ್ವಿ ಭಟ್ ಸಹಕರಿಸಿದರು.