ಸತ್ಯ ಹೊರಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ರಾಜ್ಯಸರ್ಕಾರ ಜನತೆಯ ಕ್ಷಮೆ ಯಾಚಿಸಬೇಕು: ಅರಗ ಜ್ಞಾನೇಂದ್ರ
Sunday, August 24, 2025
ಉಜಿರೆ: ಏನೇ ಆಗಲಿ, ಸತ್ಯ ಹೊರ ಬಂದಿದೆ. ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ನಗರ ನಕ್ಸಲರು ಹಾಗೂ ಎಡಪಂಥೀಯರ ನಿಗ್ರಹ ಆಗಬೇಕು ಎಂದು ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಅವರು ಶನಿವಾರ ತೀರ್ಥಹಳ್ಳಿಯಿಂದ 250 ಕಾರುಗಳಲ್ಲಿ ಭಕ್ತಾದಿಗಳೊಂದಿಗೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಶ್ರದ್ಧಾ-ಭಕ್ತಿಯಿಂದ ಗೌರವ ಅರ್ಪಿಸಿದರು.
ಎಂಟು ಶತಮಾನಗಳಿಂದ ಸತ್ಯ, ಧರ್ಮ, ನ್ಯಾಯ, ನೀತಿ, ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮಿಯರ ಶ್ರದ್ಧಾಕೇಂದ್ರ. ದೂರದಾರನಾದ ಭೀಮನಿಂದಾಗಿ ಪವಿತ್ರ ಕ್ಷೇತ್ರದ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಅಪಪ್ರಚಾರವಾಗುತ್ತಿದ್ದು, ದೇಶ-ವಿದೇಶಗಳಲ್ಲಿರುವ ಧರ್ಮಸ್ಥಳದ ಲಕ್ಷಾಂತರ ಮಂದಿ ಭಕ್ತರು ಹಾಗೂ ಅಭಿಮಾನಿಗಳಿಗೆ ತೀವ್ರ ಆತಂಕವಾಗಿದೆ. ಭಯ, ಆತಂಕ ಮತ್ತು ಗೊಂದಲದ ವಾತಾವರಣ ಮೂಡಿ ಬಂದಿದೆ. ದೇವರ ಅನುಗ್ರಹದಿಂದ ಈಗ ಸತ್ಯಹೊರಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ರಾಜ್ಯ ಸರ್ಕಾರ ಜನತೆಯ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಹೆಗ್ಗಡೆಯವರು ಪ್ರಾರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆಗಳಿಗೆ ಕಾಯಕಲ್ಪ, ಮದ್ಯವರ್ಜನ ಶಿಬಿರ, ಜ್ಞಾನದೀಪ, ಜ್ಞಾನಜ್ಯೋತಿ, ಮಹಿಳಾ ಸಬಲೀಕರಣ, ಸ್ವ-ಸಹಾಯ ಸಂಘಗಳು ಇತ್ಯಾದಿ ಹತ್ತು-ಹಲವು ಜನಮಂಗಳ ಕಾರ್ಯಕ್ರಮಗಳಿಂದ ದೀನ-ದಲಿತರ, ಹಿಂದುಳಿದ ವರ್ಗದವರ ಸರ್ವತೋಮುಖ ಪ್ರಗತಿಯಾಗಿದೆ. ಸರ್ಕಾರ ಮಾಡದ ಸೇವಾಕಾರ್ಯಗಳನ್ನು ಹೆಗ್ಗಡೆಯವರು ಮಾಡಿದ್ದಾರೆ ಎಂದು ಅಭಿನಂದಿಸಿದರು.
ದೂರುದಾರ ಭೀಮನ ಬುರುಡೆ ಪ್ರಕರಣದಿಂದ ಧರ್ಮಸ್ಥಳದ ಬಗ್ಗೆ ಅಪಪ್ರಚಾರವಾಗಿದೆ. ಇದರಲ್ಲಿ ವಿಚಾರವಂತರು ಹಾಗೂ ಎಡಪಂಥೀಯರ ಕೈವಾಡವಿದೆ. ಆರಂಭದಲ್ಲೆ ಭೀಮನನ್ನು ಬಾಯಿ ಬಿಡಿಸುತ್ತಿದ್ದರೆ ಸತ್ಯ ವಿಚಾರ ತಿಳಿಯುತ್ತಿತ್ತು. ಸುಜಾತ ಭಟ್ ಪಾತ್ರವಂತೂ ಸಿನಿಮಾಕ್ಕಿಂತಲೂ ಅದ್ಭುತವಾಗಿದೆ. ಅವರು ಸಿನಿಮಾ ತಯಾರಿಸುತ್ತಿದ್ದರೆ ಪ್ರಚಾರವೂ ಸಿಗುತ್ತಿತ್ತು. ಅಪಾರ ಹಣವನ್ನೂ ಸಂಪಾದಿಸಬಹುದಿತ್ತು ಎಂದು ಅವರು ವ್ಯಂಗ್ಯವಾಡಿದರು.
ಹೆಗ್ಗಡೆಯವರ ಜೊತೆಗೆ ಲಕ್ಷಾಂತರ ಮಂದಿ ಭಕ್ತರ, ಅಭಿಮಾನಿಗಳ ಪೂರ್ಣ ಬೆಂಬಲ ಸದಾ ಇದೆ ಎಂದು ಅವರು ಭರವಸೆ ನೀಡಿದರು. ಭಕ್ತರ ಶ್ರದ್ಧಾ-ಭಕ್ತಿಯ ಅಭಿಮಾನಕ್ಕೆ ಸಂತಸಪಟ್ಟ ಹೆಗ್ಗಡೆಯವರು ಮುಂದೆಯೂ ಸದಾ ಇದೇ ರೀತಿಯ ಪ್ರೀತಿ-ವಿಶ್ವಾಸ, ಗೌರವ ಇರಲೆಂದು ಆಶಿಸಿದರು.
ತೀರ್ಥಹಳ್ಳಿಯ ಪೂಜ್ಯಪಾದ ಚಿಕಿತ್ಸಾಲಯದ ಡಾ. ಜೀವಂಧರ ಕುಮಾರ್, ಬಿ.ಜೆ.ಪಿ.ಯ ನಾಯಕ ನವೀನ್ ಹಾಗೂ ಭಕ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ದೇಶದ ದರ್ಶನ ಮಾಡಿ, ‘ಅನ್ನಪೂರ್ಣ’ದಲ್ಲಿ ಪ್ರಸಾದ ಸ್ವೀಕರಿಸಿ ಅವರು ಊರಿಗೆ ಮರಳಿದರು.




