ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ಕ್ಕೆ ಹಿರಿಯ ಸಾಹಿತಿ ಶಕುಂತಲಾ ಭಟ್ ಆಯ್ಕೆ
Sunday, September 21, 2025
ಕುಂದಾಪುರ: ಸಾಲಿಗ್ರಾಮ ಕಾರ್ಕಡದ ಗೆಳೆಯರ ಬಳಗದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೇಷ್ಠ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ‘ಗೆಳೆಯರ ಬಳಗ, ಕಾರಂತ ಪುರಸ್ಕಾರ-2025’ ಪ್ರಶಸ್ತಿಗೆ ಈ ನಾಡಿನ ಹಿರಿಯ ಸಾಹಿತಿ, ಕಾರಂತರ ಹಿತೈಷಿ, ಸಮಾಜ ಸೇವಕಿ, ಖ್ಯಾತ ಲೇಖಕಿ, ಸಂಘಟಕಿ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಿಂತಕಿ, ಎಚ್. ಶಕುಂತಳಾ ಭಟ್ ಆಯ್ಕೆಯಾಗಿದ್ದಾರೆ.
ಕಥೆಗಾರರಾಗಿ ಕವಿಯಾಗಿ, ಇವರ ಸಾಧನೆ ಬೆಲೆಕಟ್ಟಲಾಗದು. ಇವರ ಸುಮಾರು 90 ಗ್ರಂಥಗಳು ಪ್ರಕಟಗೊಂಡಿವೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ಇವರು ಸಲ್ಲಿಸಿದ ಸಾಹಿತ್ಯ ಸೇವೆ ಅಪಾರ. ಈ ಹಿಂದೆ ಮಾಲಿನಿ ಮಲ್ಯ, ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್, ಶ್ರೀನಿವಾಸ ಸಾಸ್ತಾನ, ಹಿರಿಯಡ್ಕ ಗೋಪಾಲರಾವ್, ಎಚ್. ಇಬ್ರಾಹಿಂ ಸಾಹೇಬ್, ಪಾಂಡೇಶ್ವರ ಚಂದ್ರಶೇಖರ ಚಡಗ, ಬನ್ನಂಜೆ ಸಂಜೀವ ಸುವರ್ಣ, ವೈದೇಹಿ ಹಾಗೂ ಡಾ. ನಾ. ಮೊಗಸಾಲೆ ಇವರುಗಳು ಗೆಳೆಯರ ಬಳಗ ಕಾರಂತ ಪುರಸ್ಕಾರ ಪಡೆದವರಾಗಿದ್ದಾರೆ.
ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲಪುಷ್ಪ, ಶಾಲು ಇತ್ಯಾದಿಗಳನ್ನು ಒಳಗೊಂಡಿದೆ.
ಗೆಳೆಯರ ಬಳಗ ಕಾರಂತ ಪುರಸ್ಕಾರ-2025ನ್ನು ಅಕ್ಟೋಬರ್ 17 ರಂದು ಸಂಜೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ.