ಕರಾವಳಿಯಲ್ಲಿ ಮೊಂತಿ ಹಬ್ಬದ ಸಂಭ್ರಮ
ವಿಶೇಷ ಬಲಿಪೂಜೆಗಳು:
ಕರಾವಳಿಯ ಎರಡು ಧರ್ಮಪ್ರಾಂತ್ಯಗಳಲ್ಲಿರುವ ಎಲ್ಲ ಚರ್ಚ್ಳಲ್ಲಿ ಸೋಮವಾರ ವಿಶೇಷ ಬಲಿಪೂಜೆಗಳು ಸಾಗಿತು. ನಗರದ ಮಿಲಾಗ್ರಿಸ್, ರೊಸಾರಿಯೋ, ಉರ್ವ ಲೇಡಿಹಿಲ್, ಬೆಂದುರ್ ವೆಲ್, ಅಶೋಕ ನಗರ, ಕೂಳೂರು, ಕುಲಶೇಖರ ಸೇರಿದಂತೆ ಪ್ರಮುಖ ಚರ್ಚ್ಗಳಲ್ಲಿ ಹಬ್ಬದ ದಿನ ಬಲಿಪೂಜೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಪ್ರಾರ್ಥನಾವಿಧಿಗಳಲ್ಲಿ ಕಾಣಿಸಿಕೊಂಡರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅವರು ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ಮೊಂತಿ ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿದರು.
ಕುಟುಂಬಗಳಲ್ಲಿ ಸಹ ಭೋಜನ:
ಮೊಂತಿ ಹಬ್ಬದ ಅಂಗವಾಗಿ ಕ್ರೈಸ್ತ ಸಮುದಾಯದ ಕುಟುಂಬದವರು ಹೆಚ್ಚಾಗಿ ಸಸ್ಯಾಹಾರ ಭೋಜನವನ್ನು ತಮ್ಮ ಕುಟುಂಬದ ಮೂಲ ಮನೆಯ ಹಿರಿಯರ ಜತೆಯಲ್ಲಿ ಸೇರಿಕೊಂಡು ಮಾಡಿದರು. ಈ ಬಳಿಕ ಚರ್ಚ್ಗಳಿಂದ ತಂದ ತೆನೆಯ ಕಾಳುಗಳನ್ನು ಹಾಲು, ಪಾಯಸದ ಜತೆಯಲ್ಲಿ ಸೇವಿಸಿಕೊಂಡು ಹಬ್ಬದ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದರು. ವಿದೇಶದಲ್ಲಿರುವ ತಮ್ಮ ಕುಟುಂಬ ಸದಸ್ಯರಿಗೆ ತೆನೆಯನ್ನು ಅಂಚೆ ಲಕೋಟೆಯಲ್ಲಿ ತುಂಬಿಸಿದ ಅವರಿಗೆ ರವಾನೆ ಮಾಡುವ ಮೂಲಕ ಅವರು ಕೂಡ ಹಬ್ಬವನ್ನು ಆಚರಣೆ ಮಾಡುವಂತಾಗಲಿ ಎಂದು ಹಿರಿಯರು ಹಾರೈಸಿದರು.



