
ಪೋನ್ ಕರೆ ಮೂಲಕ ಮಹಿಳೆಗೆ ಕಿರುಕುಳ: ತನ್ನದೇ ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ ಮೂಡುಬಿದಿರೆ ಇನ್ಸ್ಪೆಕ್ಟರ್
ಕೊಪ್ಪಳ ಜಿಲ್ಲೆಯ ಶಾಂತಪ್ಪ ಪ್ರಕರಣ ಆರೋಪಿ. ಈತ ಮೂಡುಬಿದಿರೆ ಠಾಣೆಯಲ್ಲಿ ಕಳೆದ ಕೆಲ ಸಮಯಗಳಿಂದ ಪೊಲೀಸ್ ಸಿಬ್ಬಂದಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದ.
ಕೆಲವು ದಿನಗಳ ಹಿಂದೆ ಈ ಭಾಗದ ಮಹಿಳೆಯೊಬ್ಬರು ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡಲು ಠಾಣೆಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಸೆಂಟ್ರಿ ಆಗಿದ್ದವನು ಇದೇ ಶಾಂತಪ್ಪ.
ಠಾಣೆಗೆ ಬಂದವರ ವಿಳಾಸ, ಮೊಬೈಲ್ ನಂಬರನ್ನು ಠಾಣೆಯ ವಿಸಿಟರ್ಸ್ ಬುಕ್ನಲ್ಲಿ ದಾಖಲು ಮಾಡಿದ್ದ.
ಈ ಮಹಿಳೆಯ ದೂರನ್ನು ಇನ್ಸ್ಪೆಕ್ಟರ್ ಸಂದೇಶ್ ಅವರು ಬಗೆಹರಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಎರಡು ದಿನ ಕಳೆದ ನಂತರ ಶಾಂತಪ್ಪ ತಾನು ದಾಖಲಿಸಿಕೊಂಡಿದ್ದ ಆಕೆಯ ಮೊಬೈಲ್ ನಂಬರ್ಗೆ ಕರೆಮಾಡಿ ಪೀಡಿಸಿದ್ದಾನೆ. ಮತ್ತೆ ಮತ್ತೆ ಕರೆ ಮಾಡಿದ್ದಾನೆ. ಆದರೆ ಆಕೆ ಕರೆಯನ್ನು ಸ್ವೀಕರಿಸದೆ ಮನೆಯವರಲ್ಲಿ ತಿಳಿಸಿದ್ದಾರೆ. ಮನೆಯವರು ಠಾಣೆಗೆ ಬಂದು ಸಂದೇಶ್ ಅವರಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಆತನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಈ ಬಗ್ಗೆ ಸಂದೇಶ್ ಅವರು ನೇರವಾಗಿ ಕಮಿಷನರ್ ಅವರ ಗಮನಕ್ಕೆ ತಂದಿದ್ದಾರೆ. ಕಮಿಷನರ್ ಅವರು ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಕಾನೂನು ಪೊಲೀಸರಿಗೂ ಒಂದೇ, ಇತರರಿಗೂ ಒಂದೇ ಎಂಬ ಮಾತು ಹೇಳಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಆದೇಶಿಸಿದ್ದಾರೆ.
ಮೇಲಾಧಿಕಾರಿಗಳ ಆದೇಶದಂತೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಶಾಂತಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.