ಕನ್ನಡವು ಭಾಷೆಯ ಹೊರತಾಗಿ ಜೀವನದ ಆಧಾರವಾಗಬೇಕು: ನಿತೇಶ್ ಬಲ್ಲಾಳ್
ಮೂಡುಬಿದಿರೆ ಜೈನ್ ಪ್ರೌಢಶಾಲೆಯ ಶಿಕ್ಷಕ ನಿತೇಶ್ ಬಲ್ಲಾಳ್ ಮಾತನಾಡಿ ಓದಿನ ಮೂಲಕ, ಕೇಳುವಿಕೆಯ ಮೂಲಕ ಹಾಗೆ ಕಲಿಯುವಿಕೆಯ ಮೂಲಕ ಕನ್ನಡ ನಮ್ಮ ನರನಾಡಿಗಳಲ್ಲಿ ಮೇಳೈಯಿಸಬೇಕು. ಕನ್ನಡ, ಭಾಷೆಯ ಹೊರತಾಗಿ ಜೀವನದ ಆಧಾರವಾಗಬೇಕು. ಕನ್ನಡ ಪುಸ್ತಕಗಳು, ಪತ್ರಿಕೆಗಳು, ಲೇಖನಗಳು, ಕಾದಂಬರಿಗಳು ಹಾಗೂ ಕವಿತೆಗಳನ್ನು ಓದುವ ಮೂಲಕ ಭಾಷೆಯೊಂದಿಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಬರವಣಿಗೆಯ ಮೂಲಕ ನಮ್ಮ ಆಲೋಚನೆಗಳನ್ನು ಕನ್ನಡದಲ್ಲಿ ಅಭಿವ್ಯಕ್ತಿಸಿದಾಗ, ಭಾಷೆಯ ಸೃಜನಶೀಲತೆ ಮತ್ತು ಸಾಮರ್ಥ್ಯ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಭಾಷೆಯ ಉಳಿವು ಬಳಕೆಯಲ್ಲಿದೆ. ಕನ್ನಡದಲ್ಲಿ ಮಾತನಾಡುವುದು, ಬರೆಯುವುದು ಹೆಮ್ಮೆಯ ವಿಚಾರವೆನಿಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಭಾಷೆಯ ಮೇಲಿನ ಪ್ರೀತಿ ಕೆಲವೇ ಸಂಧರ್ಭಗಳಿಗೆ ಸೀಮಿತವಾಗಬಾರದು. ಬದಲಾಗಿ ದಿನನಿತ್ಯದ ಜೀವನದಲ್ಲಿ ಕನ್ನಡದ ಬಳಕೆ ಹೆಚ್ಚಿಸಿ, ಕನ್ನಡ ಪುಸ್ತಕಗಳನ್ನು ಓದಿ, ಕನ್ನಡಿಗರ ಸಾಧನೆಗಳನ್ನು ಪ್ರಚಾರ ಮಾಡಿ ಹಾಗೂ ಕನ್ನಡವನ್ನು ಹೆಮ್ಮೆಯಿಂದ ಬಳಸುವುದೇ ನಿಜವಾದ ಪ್ರೀತಿಯಾಗಿದೆ.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ರಾಜೇಶ್ವರಿ ಕೆಎನ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರಾಮ್ ಪ್ರಸಾದ್ ಎಮ್ ಮತ್ತು ಗೋಪಾಲಕೃಷ್ಣ ಕೆಎಸ್, ಎನ್ಎಸ್ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು, ವಿಭಾಗ ಮುಖ್ಯಸ್ಥರು, ಉಪನ್ಯಾಸಕ ವೃಂದದವರು ಇದ್ದರು.
ಚಿತ್ರಶ್ರೀ ಹಾಗೂ ಮನ್ವಿತ ಕನ್ನಡ ವಿಚಾರವಾಗಿ ಮಾತುಗಳನ್ನಾಡಿದರೆ, ಸುದರ್ಶನ್ ಹಾಡಿನೊಂದಿಗೆ ಎಲ್ಲರನ್ನ ರಂಜಿಸಿದರು. ಎನ್ಎಸ್ಎಸ್ನ ಘಟಕ ನಾಯಕರುಗಳು ಕನ್ನಡದ ಕುರಿತಾದ ಹಾಡಿಗೆ ಹೆಜ್ಜೆ ಹಾಕಿದರು. ಪೂರ್ಣಿಮಾ ಸ್ವಾಗತಿಸಿ, ವಿನೋದ್ ವಂದಿಸಿ, ಶಿಬಾನಿ ಕಾರ್ಯಕ್ರಮ ನಿರೂಪಿಸಿದರು.