ಸೆ.8 ರಂದು ಲೋಕ ಕಲ್ಯಾಣಕ್ಕಾಗಿ ಧರ್ಮಸ್ಥಳದಲ್ಲಿ ಗಿರಿಜಾಕಲ್ಯಾಣ ಮಹೋತ್ಸವ
ಉಜಿರೆ: ಬೆಂಗಳೂರಿನ ‘ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘ’ ಮತ್ತು ‘ನಮ್ಮ ಸಂಕಲ್ಪ ಪ್ರತಿಷ್ಠಾನ’ದ ಆಶ್ರಯದಲ್ಲಿ ಸೆ.8 ರಂದು ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ಗಿರಿಜಾಕಲ್ಯಾಣ ಮಹೋತ್ಸವ ಹಾಗೂ ಸಾಂಸ್ಕೃತಿಕ ಪರ್ವ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಮಣಿಕಂಠ ಶರ್ಮ ಮತ್ತು ಶ್ರೀನಿವಾಸ್ ತಿಳಿಸಿದ್ದಾರೆ.
ಸೋಮವಾರ ಪೂರ್ವಾಹ್ನ ಏಳು ಗಂಟೆಯಿಂದ ಸುಪ್ರಭಾತ, ಗಣಪತಿ ಪೂಜೆ, ದೇವನಾಂದಿ, ಕಂಕಣಧಾರಣೆ, ಲಾಜಾ ಹೋಮ, ಸಾಮೂಹಿಕ ಶಿವಪೂಜೆ, ಗೋ ಪೂಜೆ, ಗಜಪೂಜೆ, ಅಷ್ಟಾವಧಾನ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ.
ಮಧ್ಯಾಹ್ನ 12 ಗಂಟೆಯಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಮಹರ್ಷಿ ಆನಂದ ಗುರೂಜಿ, ಬೆಂಗಳೂರು ಅವರು ಆಶೀರ್ವಚನ ನೀಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಸರ್ಕಾರದ ಸಭಾಪತಿ ಯು.ಟಿ. ಖಾದರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಶುಭಾಶಂಸನೆ ಮಾಡುವರು.
ಸಾಂಸ್ಕೃತಿಕ ಕಾರ್ಯಕ್ರಮ: ಶಶಿಧರ ಕೋಟೆ ಮತ್ತು ಬಳಗದವರಿಂದ ಭಕ್ತಿಗೀತೆಗಳ ಗಾಯನ. ಬೆಂಗಳೂರಿನ ತ್ಯಾಗರಾಜ ನಾಟ್ಯಾಲಯದ ವಿದುಷಿ ಯಾಗ್ನಿಕ ಅಯ್ಯಂಗಾರ್ ಅವರಿಂದ ನೃತ್ಯ ಪ್ರದರ್ಶನ.