ಮಗುವಿನ ಸರ ಕಳ್ಳತನ: ಆರೋಪಿ ಮಹಿಳೆ ಬಂಧನ
ಬಂಧಿತ ಮಹಿಳೆಯನ್ನು ಉಳ್ಳಾಲ ನಿವಾಸಿ ಮಿನ್ನತ್ ಎಂದು ಗುರುತಿಸಲಾಗಿದೆ.
ಆರೋಪಿತೆಯಿಂದ ಅಂದಾಜು ರೂ 1,80,000 ಮೌಲ್ಯದ 18 ಗ್ರಾಂ. ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಬೆಳ್ಮ ಗ್ರಾಮ ನಿವಾಸಿ ರಹಮತ್ ಅವರು ತನ್ನ ಮಕ್ಕಳೊಂದಿಗೆ ಜೂನ್ 2 ರಂದು ತೊಕ್ಕೊಟ್ಟುವಿನ ಸಾಗರ ಕಲೆಕ್ಷನ್ ಅಂಗಡಿಗೆ ತೆರಳಿದ್ದರು. ಈ ವೇಳೆ ಮಳೆ ಬಂದ ಕಾರಣ ಬೇಕರಿಯ ಮುಂದೆ ಇವರು ನಿಂತುಕೊಂಡಿದ್ದರು. ಇದೇ ಸಂದರ್ಭದಲ್ಲಿ ರಹಮತ್ ರವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನವನ್ನು ಬುರ್ಖಾ ಧರಿಸಿ ಬಂದ ಮಹಿಳೆಯೊಬ್ಬರು ಎಗರಿಸಿದ್ದರು. ಈ ಬಗ್ಗೆ ರಹಮತ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಬೇಧಿಸಿದ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ವಿರೂಪಾಕ್ಷ ನೇತೃತ್ವದ ತಂಡ ಆರೋಪಿತೆ ಉಳ್ಳಾಲದ ನಿವಾಸಿ ಮಿನ್ನತ್ ಎಂಬಾಕೆಯನ್ನು ಸೆ.12 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸುಲಿಗೆ ಮಾಡಿದ 10 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದೆ.
ಈಕೆ ಜುಲೈ 9 ರಂದು ಪಜೀರ್ ಗ್ರಾಮದ ಕಂಬಳ ಪದವು ಬಳಿ ಇರುವ ಕೆ.ಎಮ್.ಎಸ್ ಕನ್ವೇನ್ ಹಾಲ್ ಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮಹಿಳೆಯೊಬ್ಬರ ಬ್ಯಾಗ್ ನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿರುವುದು ತಿಳಿದು ಬಂದಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತೆ ಮಿನ್ನತ್ ಎಂಬಾಕೆಯಿಂದ ಸುಲಿಗೆ ಮಾಡಿದ ಚಿನ್ನವನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು
ಮಹಿಳಾ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.