
ರಸ್ತೆ ಅವ್ಯವಸ್ಥೆ ಖಂಡಿಸಿ ಡಿವೈಎಫ್ಐ ಪ್ರತಿಭಟನೆ, ಶಾಸಕರ ವಿರುದ್ದ ಆಕ್ರೋಶ
Wednesday, September 17, 2025
ಉಳ್ಳಾಲ: ಉಳ್ಳಾಲ ತಾಲ್ಲೂಕಿನ ಕಂಬಳಪದವುನಿಂದ ಮುಡಿಪು- ಮುದುಂಗಾರು ತನಕದ ರಸ್ತೆಯು ಹೊಂಡಮಯಗೊಂಡು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ತಕ್ಷಣ ರಸ್ತೆಗಳನ್ನು ದುರಸ್ಥಿಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಮುಡಿಪು ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ ಮುಡಿಪುವಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ "ಜಿಲ್ಲೆಯ ಉದ್ದಗಲಕ್ಕೂ ರಸ್ತೆ ಗಳು ಸಂಪೂರ್ಣ ಹದಗೆಟ್ಟಿವೆ. ನಿರಂತರವಾಗಿ ಸಾರ್ವಜನಿಕರು ಸಾವು ನೋವುಗಳನ್ನು ಅನುಭವಿಸುತ್ತಲೇ ಇದ್ದಾರೆ. ಇದರ ವಿರುದ್ದ ಡಿವೈಎಫ್ಐ ನೇತೃತ್ವದಲ್ಲೇ ಮಂಗಳೂರು-ಉಳ್ಳಾಲ ಭಾಗದಲ್ಲಿ ಒಂಬತ್ತನೇ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಗಿದ್ದರೂ ಇಲ್ಲಿನ ಶಾಸಕರು ನಿದ್ದೆಯಿಂದ ಎದ್ದೇಳದೇ ಇರುವುದು ಖೇದಕರ. ಶಾಸಕರು ಇಲ್ಲಿನ ಇಂಜಿನಿಯರ್ ಗಳನ್ನು ಮಾತ್ರ ಹೊಣೆಯನ್ನಾಗಿಸುವ ಮೂಲಕ ಶಾಸಕರು ತಮ್ಮ ನೈತಿಕತೆಯನ್ನು ಮರೆತಿದ್ದಾರೆ. ಸರಕಾರ ಜನಪ್ರತಿನಿಧಿಗಳು ರಸ್ತೆ ಸುರಕ್ಷತೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಉಳ್ಳಾಲ ತಾಲ್ಲೂಕಿನಲ್ಲಿ ಮೂರು ನಾಲ್ಕು ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಇದ್ದರೂ ಕೂಡಾ ಇಲ್ಲಿ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದಿದ್ದರೂ ಇಲ್ಲಿನ ಶಾಸಕರುಗಳು ಮಾತ್ರ ಇಂಜಿನಿಯರ್ ಗಳ ಮೇಲೆ ಎತ್ತಿಕಟ್ಟುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ." ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪ್ರತಿಯೊಂದಕ್ಕೂ ಕಟೌಟ್ ಗಳನ್ನು ಹಾಕಿಸುವ ಯುಟಿ ಖಾದರ್ ಅವರು ರಸ್ತೆ ದುರಸ್ತಿ ಮಾಡಲು ಅಸಾಧ್ಯವಾಗಿದೆ ಕ್ಷಮಿಸಿ ಎಂದು ಕಟೌಟ್ ಹಾಕಿ. ರಾಜ್ಯದ ಎಲ್ಲ ಶಾಸಕರಿಗೂ ಪಾಠ ಹೇಳುವಂತ ಸ್ಪೀಕರ್ ಆಗಿರುವ ಶಾಸಕ ಯುಟಿ ಖಾದರ್ ಅವರಿಗೆ ಕೂಡಾ ಜನತೆ ಪಾಠ ಕಲಿಸುವ ಸಂದರ್ಭ ಮುಂದೆ ಬರಲಿದೆ. ಶಾಸಕರಿಗೆ ಕ್ಷೇತ್ರದ ಜನರ ಮೇಲೆ ನಿಜವಾದ ಕಾಳಜಿ ಇದ್ದರೆ ಇಲ್ಲಿನ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲು ಸಾಧ್ಯವಾಗುತ್ತದೆಯೋ ಎಂದು ಉತ್ತರ ನೀಡಬೇಕು. ಉಳ್ಳಾಲ ತಾಲ್ಲೂಕು ರಚನೆಯಾಗಿ ವರ್ಷಗಳು ಸಂದರೂ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದೇ ಇರುವುದು ನಿಜಕ್ಕೂ ಶಾಸಕರಿಗೆ ನಾಚಿಕೆಗೇಡಿನ ಸಂಗತಿ" ಎಂದು ಸಂತೋಷ್ ಬಜಾಲ್ ಆರೋಪಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಝಾಕ್ ಮುಡಿಪು, ಉಳ್ಳಾಲ ವಲಯ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮುಡಿಪು ಆಟೋ ರಿಕ್ಷಾ ಯೂನಿಯನ್ ನ ಹರೀಶ, ದಲಿತ ಸಂಘಟನೆ ನಾಯಕ ನಾಗೇಶ್ ಮೊಂಟೆಪದವು, ಸಾಮಾಜಿಕ ಕಾರ್ಯಕರ್ತ ಅಬೂಬಕರ್ ಜಲ್ಲಿ, ಕಾರ್ಮಿಕ ಮುಖಂಡ ರಫೀಕ್ ಹರೇಕಳ, ಡಿವೈಎಫ್ಐ ಮುಡಿಪು ನಾಯಕರಾದ ಇರ್ಫಾನ್ ಇರಾ, ಶಾಫಿ ಮೊಖಟೆಪದವು, ಮುಂತಾದವರು ಉಪಸ್ಥಿತರಿದ್ದರು.