ರಸ್ತೆ ಅಪಘಾತದಿಂದ ಸಾಮಾಜಿಕ ಕಾರ್ಯಕರ್ತ ಮೃತ್ಯು
ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ದಿ.ಮುತ್ತಪ್ಪ ಮೂಲ್ಯರ ಪುತ್ರ ಲೋಕೇಶ್ ಮೂಲ್ಯ (44) ಅವರು ಮೃತಪಟ್ಟವರಾಗಿದ್ದಾರೆ.
ಲೋಕೇಶ್ ಅವರು ಕಲ್ಲಡ್ಕದ ಪೆಟ್ರೋಲ್ ಪಂಪ್ವೊಂದರ ಮುಂಭಾಗದಲ್ಲಿ ರಸ್ತೆಯನ್ನು ದಾಟಲೆಂದು ನಿಂತಿದ್ದ ವೇಳೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಂದ ಆಟೋರಿಕ್ಷಾ ಢಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಈ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಲೋಕೇಶ್ ಅವರನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಾಲಕನ ಪತ್ನಿ, ಮಕ್ಕಳು ಹಾಗೂ ಮಾವ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಲೋಕೇಶ್ ಅವರು ಸುಭಾಷ್ ನಗರದ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಸದಸ್ಯರಾಗಿದ್ದು, ಸ್ಥಳೀಯವಾಗಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರಲ್ಲದೆ ಧಾರ್ಮಿಕ ಚಟುವಟಿಕೆಯಲ್ಲಿಯು ಸಕ್ರೀಯರಾಗಿದ್ದರೆನ್ನಲಾಗಿದೆ. ಹಲವಾರು ಬಡವರ ಸಮಸ್ಯೆಗಳಿಗೂ ಅವರು ಸ್ಪಂದಿಸುವ ಮೂಲಕ ಜನಾನುರಾಗಿದ್ದರು.
ಮೃತರು ಪತ್ನಿ ಹಾಗೂ ಎರಡು ಮಕ್ಕಳ ಸಹಿತ ಅನೇಕ ಬಂಧು, ಬಳಗವನ್ನು ಅಗಲಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇವರ ಈ ಅಕಾಲಿಕ ಸಾವಿನಿಂದ ಸಜೀಪಮೂಡ ಗ್ರಾಮದ ಸುಭಾಸ್ ನಗರದಲ್ಲಿ ನೀರವ ಮೌನ ಅವರಿಸಿದೆ.