ಮೀನುಗಾರನ ಕುಟುಂಬಕ್ಕೆ ಸಚಿವರಿಂದ ಪರಿಹಾರ ವಿತರಣೆ
Thursday, October 2, 2025
ಕುಂದಾಪುರ: ಮೀನುಗಾರಿಕೆಗಾಗಿ ಕಡಲಿಗೆ ತೆರಳಿದ್ದ ಸಂದರ್ಭ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಮೃತಪಟ್ಟ ಕೋಟ ಕೋಡಿ ಹೊಸಬೆಂಗ್ರೆಯ ನಿವಾಸಿ ಶರತ್ ಮನೆಗೆ ಭೇಟಿ ನೀಡಿದ ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಮೃತರ ಅವಲಂಬಿತರಿಗೆ ಹತ್ತು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಕೋಡಿ ಹೊಸಬೆಂಗ್ರೆಯ ಲಕ್ಷ್ಮಣ ಖಾರ್ವಿ ಹಾಗೂ ಶಾಂತಿ ಖಾರ್ವಿಯವರ ಪುತ್ರ ಶರತ್ ಖಾರ್ವಿ ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ದೋಣಿ ಮಗುಚಿ ದೋಣಿಯ ಅಡಿ ಸಿಕ್ಕಿಬಿದ್ದು ಮೃತಪಟ್ಟಿದ್ದರು.
ಘಟನೆ ನಡೆದ ಸಂದರ್ಭದಲ್ಲಿ ಸಚಿವರು ಸಂತಾಪ ವ್ಯಕ್ತಪಡಿಸಿದ್ದರು. ಬುಧವಾರ ಕೋಟಕ್ಕೆ ಆಗಮಿಸಿದ ಸಚಿವ ವೈದ್ಯ ಮೃತ ಮೀನುಗಾರನ ಮನೆಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಪರಿಹಾರ ಒದಗಿಸಿದರು. ಮೀನುಗಾರರ ಜತೆ ಸರಕಾರ ಇದೆ ಎಂದು ಧೈರ್ಯ ತುಂಬಿದರು. ಹೆಚ್ಚುವರಿ ಐದು ಲಕ್ಷ ರೂ. ಪರಿಹಾರಕ್ಕಾಗಿ ಮೀನುಗಾರಿಕೆ ಇಲಾಖೆ ಕಡತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಿರಣ್ ಕೊಡ್ಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮೀನುಗಾರರ ಸಮಸ್ಯೆಯ ಬಗ್ಗೆ ಸಚಿವರಿಗೆ ವಿವರಿಸಿದರು.
ಸ್ಥಳೀಯ ಪ್ರಮುಖರಾದ ಶಂಕರ ಬಂಗೇರ ಅವರು ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.