
ಅಸ್ವಸ್ಥಗೊಂಡ 13 ಮಂದಿ ಚೇತರಿಸಿಕೊಂಡಿದ್ದಾರೆ: ಎಸ್ಪಿ ಸ್ಪಷ್ಟನೆ
ಮಂಗಳೂರು: ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಅಸ್ವಸ್ಥಗೊಂಡಿದ್ದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದಿತ್ತು. ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ ವೇಳೆ ನೂಕು ನುಗ್ಗಲು ಉಂಟಾದ ಕಾರಣ ಕೆಲವರು ಅಸ್ವಸ್ಥಗೊಂಡಿದ್ದರು. ಈ ಬಗ್ಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಮಾಹಿತಿ ನೀಡಿದ್ದು, ಘಟನೆಯಲ್ಲಿ ಒಟ್ಟು 13 ಮಂದಿ ಅಸ್ವಸ್ಥಗೊಂಡಿದ್ದರು. ಎಲ್ಲರೂ ಈಗ ಚೆತರಿಸಿಕೊಂಡಿರೋದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಆಹಾರ ಮತ್ತು ಉಡುಗೊರೆ ಕೊಡುವುದು ವಿಳಂಬವಾದ ಹಿನ್ನಲೆ ಹೈಪೊಗ್ಲಿಸಿಮಿಯಾ ಅಥವಾ ನಿರ್ಜಲೀಕರಣದಿಂದಾಗಿ ಮಹಿಳೆಯರು ಅಸ್ವಸ್ಥಗೊಂಡಿದ್ದರು. ಆ ಪೈಕಿ ಕೆಲವರಿಗೆ ಘಟನಾ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೆಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅವರು ಈಗ ಚೇತರಿಸಿಕೊಂಡಿದ್ದಾರೆ. ಗುಣಮುಖರಾಗಿ ಎಲ್ಲರೂ ಮನೆಗೆ ತೆರಳಿದ್ದಾರೆ. ಘಟನೆಯಲ್ಲಿ ಯಾರಿಗೂ ತೀವ್ರವಾಗಿ ತೊಂದರೆ ಆಗಿಲ್ಲ ಎಂದು ಡಾ. ಕೆ. ಅರುಣ್ ತಿಳಿಸಿದ್ದಾರೆ.
ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ‘ಅಶೋಕ ಜನಮನ-2025’ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪಾವಳಿ ಹಬ್ಬದ ಹಿನ್ನಲೆ ಅಶೋಕ್ ರೈ ಮಾಲೀಕತ್ವದ ಟ್ರಸ್ಟ್ನಿಂದ ಜನರಿಗೆ ತಟ್ಟೆ, ವಸ್ತ್ರ ಹಂಚಲಾಗಿತ್ತು. ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು.
ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾದ ಪರಿಣಾಮ ಉಸಿರಾಡಲೂ ಆಗದ ಸ್ಥಿತಿ ಸ್ಥಳದಲ್ಲಿ ನಿರ್ಮಾಣವಾಗಿತ್ತು. ಮೊದಲೇ ಮಳೆಯಿಂದಾಗಿ ಕೆಸರುಮಯವಾಗಿದ್ದ ಮೈದಾನದಲ್ಲಿ ಸರಿಯಾದ ವ್ಯವಸ್ಥೆ ಮಾಡಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಆಯೋಜಕರಿಗೆ ಪೊಲೀಸ್ ಇಲಾಖೆ ಪತ್ರ ಕೂಡ ಬರೆದು ಸೂಚಿಸಿತ್ತು. ಅಲ್ಪ ಸ್ವಲ್ಪ ಖುರ್ಚಿ ಹಾಕಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಕರ ಮೇಲೆ ಗರಂ ಆಗಿದ್ದು, ಹೆಚ್ಚಿನ ಆಸನ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿತ್ತು. ಬಳಿಕ ಆಯೋಜಕರು ಸಹ ಹೆಚ್ಚಿನ ಖುರ್ಚಿಗಳನ್ನು ಹಾಕಿದ್ದರು.