ಉನ್ನತ ಶಿಕ್ಷಣ ಯಶಸ್ಸಿನ ಹಾದಿಯೊಂದಿಗೆ ವೃತ್ತಿ ಮಾರ್ಗದರ್ಶನ ದಿಕ್ಕು ತೋರಿಸುತ್ತದೆ: ರೋನಾಲ್ಡ್ ಪಿಂಟೋ
Wednesday, October 15, 2025
ಮಂಗಳೂರು: ಉನ್ನತ ಶಿಕ್ಷಣವು ಜೀವನದ ಯಶಸ್ಸಿಗೆ ದಾರಿ ತೋರಿಸುವ ಹಂತವಾಗಿದ್ದು, ಸರಿಯಾದ ವೃತ್ತಿ ಮಾರ್ಗದರ್ಶನವೂ ಅದನ್ನು ಸರಿಯಾದ ದಿಕ್ಕಿಗೆ ಮುನ್ನಡೆಸುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಗುರಿಯನ್ನು ಗಮನಿಸಿ ವೃತ್ತಿ ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಶಿಕ್ಷಣ ಮತ್ತು ಮಾರ್ಗದರ್ಶನದ ಸಂಯೋಜನೆಯಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರದ ಪ್ರಾಧ್ಯಾಪಕ ರೋನಾಲ್ಡ್ ಪಿಂಟೋ ಹೇಳಿದರು.
ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಐಕ್ಯೂಎಸಿ, ವಿಜ್ಞಾನ ವಿಭಾಗ ಹಾಗೂ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಹಯೋಗದಲ್ಲಿ ‘ಉನ್ನತ ಶಿಕ್ಷಣ ಮತ್ತು ವಿಜ್ಞಾನ ವಿಭಾಗದಲ್ಲಿ ಇರುವ ಅವಕಾಶಗಳು’ ಎಂಬ ವಿಷಯದ ಕುರಿತು ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ವೃತ್ತಿ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನೀಡಿದ ಅವರು ಮನೋವಿಜ್ಞಾನಿಕ ಪರೀಕ್ಷೆಗಳ ಮೂಲಕ ಅವರ ಆಸಕ್ತಿ ಮತ್ತು ಭವಿಷ್ಯದ ಶಿಕ್ಷಣದ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣವನ್ನು ಜೀವನದ ಮೆಟ್ಟಿಲಾಗಿ ರೂಪಿಸಿಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್ ಹಾಗೂ ಐಕ್ಯೂಎಸಿ ಸಹ-ಸಯೋಜಕಿ ಡಾ. ಜ್ಯೋತಿಪ್ರಿಯಾ, ವಿಜ್ಞಾನ ವಿಭಾಗಗಳ ಸಂಯೋಜಕಿ ಪ್ರೊ. ವಸಂತಿ ಪಿ., ವಿಜ್ಞಾನ ಸಂಘದ ಸಂಯೋಜಕ ಡಾ. ರಮಾಕಾಂತ ಪುರಾಣಿಕ್ ಎಚ್. ಉಪಸ್ಥಿತರಿದ್ದರು.
ಶ್ರೀಶ ಪ್ರಾರ್ಥನೆಯನ್ನು ನೆರವೇರಿಸಿದರು. ನಿರೀಕ್ಷಾ ಅತಿಥಿ ಪರಿಚಯ ಮಾಡಿದರು. ತೇಜಸ್ವಿನಿ ಸ್ವಾಗತಿಸಿ, ಅನನ್ಯ ವಂದಿಸಿದರು. ಸೃಷ್ಟಿ ನಿರೂಪಿಸಿದರು.

