ಸಮೀಕ್ಷೆ: ಉಡುಪಿ ಮೂವರು ಶಿಕ್ಷಕರು ಅಮಾನತು
ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವತಿಯಿಂದ ನಡೆದಿರುವ ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಾಗಿ ನಿಯುಕ್ತಿಗೊಂಡಿದ್ದ ಮೂವರು ಶಿಕ್ಷಕಿಯರನ್ನು ಗಣತಿಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಅ.೪ರಂದು ಅಮಾನತಿನಲ್ಲಿರಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಉಡುಪಿ ತಾಲೂಕಿನ ಒಳಕಾಡು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸುರೇಖ ಹಾಗೂ ರತ್ನ, ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕಿ ಪ್ರಭಾ ಬಿ ಇವರನ್ನು ಗಣತಿದಾರರಾಗಿ ನೇಮಿಸಲಾಗಿದ್ದು, ಈ ಶಿಕ್ಷಕರು ನೇಮಕಾತಿ ಆದೇಶವನ್ನು ಸ್ವೀಕರಿಸದೇ, ದೂರವಾಣಿ ಮೂಲಕ ಸಂಪರ್ಕಿಸಿದರೂ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು.
ಈ ಮೂವರು ಶಿಕ್ಷಕಿಯರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರೂ ಈವರೆಗೆ ಸಮಜಾಯಿಷಿ ನೀಡಿಲ್ಲದ ಕಾರಣ ಮೂವರು ಸಮೀಕ್ಷೆದಾರರನ್ನು ಅ.೪ರಂದು ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.
ಇದೇ ರೀತಿ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ಸಮೀಕ್ಷೆದಾರರು ನಿರ್ಲಕ್ಷ್ಯ ತೋರಿದರೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಚ್ಚರಿಕೆ ನೀಡಿದ್ದಾರೆ.