ಸತ್ಯವನ್ನು ತಿರುಚಿ ಸುಳ್ಳು ಸೃಷ್ಠಿಸಿ ಪ್ರಚಾರಕ್ಕೆ ಬಳಸಿಕೊಂಡರೆ ಕ್ರಮ: ಎಸ್ಪಿ

ಸತ್ಯವನ್ನು ತಿರುಚಿ ಸುಳ್ಳು ಸೃಷ್ಠಿಸಿ ಪ್ರಚಾರಕ್ಕೆ ಬಳಸಿಕೊಂಡರೆ ಕ್ರಮ: ಎಸ್ಪಿ


ಮಂಗಳೂರು: ಪುತ್ತೂರು ಘಟನೆಯನ್ನು ಎಲ್ಲರೂ ವಿಮರ್ಷೆ ಮಾಡಬಹುದು ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆ ಸೃಷ್ಠಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಶ್ವರಮಂಗಲ ಎಂಬಲ್ಲಿ ಲಾರಿಯೊಂದರಲ್ಲಿ ಅನಧಿಕೃತ ಗೋ ಸಾಗಾಟ ಪ್ರಕರಣದಲ್ಲಿ 12 ಗೋವುಗಳನ್ನು ವಶಕ್ಕೆ ಪಡೆದು, ಓರ್ವ ಆರೋಪಿಯ ಕಾಲಿಗೆ ಗುಂಡೇಟು ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿರುವ ಪ್ರಕಟಣೆಯಲ್ಲಿ ಈ ವಿಚಾರ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೈಯಲ್ಲಿ ಕತ್ತಿ ಹಿಡಿದುಕೊಂಡು ಲಾರಿಯ ಹಗ್ಗ ಮತ್ತು ಟರ್ಪಾಲ್ ಕೊಯ್ಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಒಳಗೊಂಡಂತೆ ಪುತ್ತೂರಿನಲ್ಲಿ ನಡೆದ ಘಟನೆಯ ಬಗ್ಗೆ ಸಮಗ್ರ ವಿವರಣೆ ನೀಡಿರುವ ಎಸ್ಪಿ ಅವರು ಈ ಘಟನೆಯ ನಂತರ ಪೊಲೀಸರ ಜೊತೆಗೆ ಸ್ಥಳೀಯರು ಹಾಗೂ ಅರುಣ್ ಕುಮಾರ್ ಪುತ್ತಿಲ ಜಾನುವಾರುಗಳನ್ನು ವಾಹನದಿಂದ ಇಳಿಸುವ ಕೆಲಸ ಮಾಡುತ್ತಿರುವುದಾಗಿದೆ. ಜಾನುವಾರುಗಳ ಇನ್ನಷ್ಟು ಸಾವನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ನಿರೀಕ್ಷಕರು ಅನುಮತಿ ಕೊಟ್ಟಿರುವುದು ಕಂಡುಬಂದಿರುತ್ತದೆ. 

ಈ ಪ್ರಕರಣದಲ್ಲಿ, ಯಾವುದೇ ಧಾರ್ಮಿಕ ಸಂಘಟನೆ ಅಥವಾ ವ್ಯಕ್ತಿಯೊಂದಿಗೆ ಪೊಲೀಸರ ಯಾವುದೇ ಸಹಭಾಗಿತ್ವ ಅಥವಾ ದುರುದ್ದೇಶ ಕಂಡುಬಂದಿಲ್ಲ. ಆದರೆ ದೂರವಾಣಿಯಲ್ಲಿ ಮಾತನಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ನಂತರ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶವಿರುವ ತಪ್ಪು ನಿರ್ಣಾಯ ತೆಗೆದು ಕೊಂಡಿರುವುದು ಇನ್ಸ್‌ಪೆಕ್ಟರ್ ಅವರ ತಪ್ಪಾಗಿರುತ್ತದೆ. ಆದ್ದರಿಂದ ಇನ್ಸ್‌ಪೆಕ್ಟರ್ ಚಾರ್ಜ್ ಮೆಮೊ ನೀಡಲಾಗುತ್ತದೆ. ಮುಂದಿನ ದಿವಸಗಳಲ್ಲಿ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ಮಾಡಲು ಅವಕಾಶ ನೀಡದೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುವುದು. 

ವಾಹನವನ್ನು ಪೋಲಿಸರು ಹಿಂಬಾಲಿಸಿ ಬಳಿಕ ನಿಲ್ಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ವಾಹನ ನಿಲ್ಲಿಸುವಲ್ಲಿ ಯಾವುದೇ ಸಂಸ್ಥೆಯ ಪಾತ್ರವು ಇರುವುದಿಲ್ಲ. ಪ್ರಕರಣವನ್ನು ನ್ಯಾಯಸಮ್ಮತ ತನಿಖೆಗಾಗಿ ಮರು ದಿನವೇ ಪುತ್ತೂರು ಉಪವಿಭಾಗದ ವ್ಯಾಪ್ತಿಯಿಂದ ವರ್ಗಾಯಿಸಲಾಯಿತು.

ಈ ಘಟನೆಯ ನಂತರ ಪಿಎಸೈ ಬೆಳ್ಳಾರೆ ಹಾಗೂ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದರು. ಉಳಿದ ಅಧಿಕಾರಿಗಳು ತನಿಖಾ ಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸುತ್ತಿದ್ದರು. ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಆದ್ದರಿಂದ ಅದರಲ್ಲಿ ಇರುವ ಜಾನುವಾರುಗಳನ್ನು ಇಳಿಸಬಹುದೇ ಎಂದು ಕೇಳಿರುವುದಾಗಿ ಗೊತ್ತಾಗಿರುತ್ತದೆ. ನಂತರ ಕಾನ್ಸ್‌ಸ್ಟೇಬಲ್ ಅವರು ಇನ್ಸ್‌ಪೆಕ್ಟರ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್ ಪುತ್ತಿಲ ಕಾನ್ಸ್‌ಸ್ಟೇಬಲ್‌ರಲ್ಲಿ ಮೊಬೈಲ್ ಕೇಳಿ ಪಡೆದುಕೊಂಡು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿರುವುದಾಗಿದೆ. ಅದಕ್ಕೆ ಇನ್ಸ್‌ಪೆಕ್ಟರ್‌ರವರು ಅನುಮತಿ ಕೊಟ್ಟಿರುತ್ತಾರೆ ಎಂದು ಕಂಡುಬಂದಿರುತ್ತದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯು ಬೇರೆಯದೇ ರೀತಿಯಲ್ಲಿ ಪ್ರಚಾರಗೊಂಡಿರುತ್ತದೆ ಎಂದು ಎಸ್ ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article