ರಾಜ್ಯ ಕಂಬಳ ಅಸೋಸಿಯೇಷನ್ ಪದಾಧಿಕಾರಿಗಳ ಪ್ರಥಮ ಸಭೆ
ಕಂಬಳ ಸಮಿತಿಗಳ ವ್ಯವಸ್ಥಾಪಕರು ಹಾಗೂ ಅಸೋಸಿಯೇಷನ್ ನ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಸುವ ಬಗ್ಗೆ ನಿರ್ಣಯಿಸಲಾಯಿತು.
ಸ್ನೇಹಕೂಟ ಕಂಬಳಗಳಿಂದ ಸಮಸ್ಯೆ...?
ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗಳಲ್ಲಿ ಸ್ನೇಹಕೂಟಗಳು ನಡೆಯುತ್ತಿದ್ದು ಅಲ್ಲಿ ಯಾವುದೇ ರೀತಿಯ ಶಿಸ್ತು ಮತ್ತು ಸಮಯಪಾಲನೆ ಇರುವುದಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಸ್ನೇಹಕೂಟ ಕಂಬಳ ಬೇಕೇ? ಬೇಡವೇ? ಎನ್ನವ ಕುರಿತು ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.
ಅಲ್ಲದೆ ಮುಂದಿನ ಕಂಬಳಗಳಲ್ಲಿ ಸಬ್ಜ್ಯೂನಿಯರ್ ವಿಭಾಗವನ್ನು ಕೈಬಿಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಅಸೋಷಿಯೇಶನ್ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಭಾಗದ ರಾಜ್ಯ ಜನಪ್ರತಿನಿಧಿಗಳ ಬೆಂಬಲ, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಅದಿವೇಶನದಲ್ಲೂ ಮುಖ್ಯಮಮಂತ್ರಿಗಳು ರಾಜ್ಯ ಮಾನ್ಯತೆಯ ಭರವಸೆ ನೀಡಿದ್ದರು. ಅಸೋಸಿಯೆಶನ್ ಅಸ್ವಿತ್ವಕ್ಕೆ ಬಂದಿರುವುದರಿಂದ ಸರ್ಕಾರದ ನಿರ್ದೇಶನದಂತೆ ನಮ್ಮ ಕಾರ್ಯ ವೈಖರಿ ನಡೆಯಬೇಕಾಗಿದೆ. ಕಂಬಳಗಳಿಗೆ ಅನುದಾನ, ಕಂಬಳ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸಹಿತ ವಿವಿಧ ಸವಲತ್ತುಗಳಿಗೆ ಬೇಕಾದ ದಾಖಲೆಗಳನ್ನು ಕ್ರೋಢಿಕರಿಸುವುದು ಕೂಡ ಅಗತ್ಯ. ಕಂಬಳಕ್ಕೆ ಸಂಬಂಧಪಟ್ಟ ಎಲ್ಲರೂ ಅಸೋಶಿಯೇಷನ್ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಅಸೋಷಿಯೇಶನ್ನ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಅವರನ್ನು ಪದಾಧಿಕಾರಿಗಳು ಅಭಿನಂದಿಸಿದರು. 2025-26 ಸಾಲಿನ ಕಂಬಳ ವೇಳಾಪಟ್ಟಿ ಹಾಗೂ ಕಂಬಳದ ನೀತಿ ನಿಯಮಗಳನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಳಿಲಾಯಿತು. ಕಂಬಳ, ತುಳುನಾಡು ಹಾಗೂ ಕ್ರೀಡಾ ಪ್ರಾಧಿಕಾರದ ಧ್ವಜವನ್ನು ಪ್ರತಿ ಕಂಬಳಗಳಲ್ಲಿ ಅಳವಡಿಸುವಂತೆ ಸೂಚಿಸಲಾಯಿತು.
ಉಪಾಧ್ಯಕ್ಷ ನವೀನ್ ಚಂದ್ರ ಆಳ್ವ, ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ರೋಹಿತ್ ಕುಮಾರ್ ಹೆಗ್ಡೆ, ಶಾಂತರಾಮ್ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶ್ರೀಕಾಂತ್ ಭಟ್, ಪಿ.ಆರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಕಾಜವ, ಅರುಣ್ ಶೆಟ್ಟಿ, ಚಂದ್ರಹಾಸ ಸನಿಲ್, ಪಿಯೂಸ್ ಎಸ್.ರೊಡ್ರಿಗಸ್, ಸುಧಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಸಹ ಸದಸ್ಯರಾದ ವಿಕ್ರಂ ವೆಂಕಟ್ ಪೂಜಾರಿ, ಕೇಶವ ಭಂಡಾರಿ ಈ ಸಂದಭ೯ಉಪಸ್ಥಿತರಿದ್ದರು.