ಮುಖ್ಯನ್ಯಾಯಾಧೀಶರಿಗೆ ಶೂ ಎಸೆದ ಪ್ರಕರಣ: ದಸಂಸಯಿಂದ ರಾಜ್ಯಪಾಲರಿಗೆ ಮನವಿ ಮೂಲಕ ಆಗ್ರಹ
Monday, October 13, 2025
ಪುತ್ತೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ ಮೇಲೆ ವಕೀಲ ರಾಜೇಶ್ ಕಿಶೋರ್ ಧರಿಸಿದ ಶೂ ಎಸೆದಿರುವುದು ಖಂಡನೀಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಘ ಸಮಿತಿ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಹೇಳಿದರು.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಈ ಕೃತ್ಯ ಭಾರತದ ಸಂವಿಧಾನದ ಮೇಲೆ ನಡೆಸಿದ ದಾಳಿಯಾಗಿದೆ. ದಲಿತರೊಬ್ಬರು ಮುಖ್ಯ ನ್ಯಾಯ ಮೂರ್ತಿಯ ಪೀಠದಲ್ಲಿ ಕುಳಿತು ನ್ಯಾಯ ನೀಡುವುದನ್ನು ಒಪ್ಪದ ಮನೋಸ್ಥಿತಿಗಳು ಇಂದಿಗೂ ಇರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಅವರು ಆದೇಶಿಸುತ್ತಿಲ್ಲ. ಗವಾಯಿಯವರು ದಲಿತ ಸಮುದಾಯಕ್ಕೆ ಸೇರಿದವರೆಂಬ ದ್ವೇಷ ಭಾವನೆಯಿಂದ ಈ ಕೃತ್ಯ ಎಸಗಿದ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಂಘಟನಾ ಸಂಚಾಲಕ ಪಿ. ಕೆ. ರಾಜು, ಬೆಳ್ತಂಗಡಿ ತಾಲೂಕು ಸಂಚಾಲಕ ಪದ್ಮನಾಭ ಗರ್ಡಾಡಿ, ಮಾಜಿ ಸಂಚಾಲಕ ಗಣೇಶ್ ಕರೆಕ್ಕಾಡು, ಕಡಬ ವಲಯ ಸಂಚಾಲಕ ಕಮಲಾಕ್ಷ ಕಡಬ ಉಪಸ್ಥಿತರಿದ್ದರು. ಬಳಿಕ ಪುತ್ತೂರು ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.