ನ.10 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ
ಕೆವಿಜಿ ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ಳಿ ರಥ ನಿರ್ಮಾಣ ಅಂತಿಮ ಹಂತದಲ್ಲಿದ್ದು ನ.3 ರಂದು ಕೋಟೇಶ್ವರದಿಂದ ಹೊರಟು ನ.4 ರಂದು ಸುಳ್ಯಕ್ಕೆ ಮತ್ತು ನ.5 ರಂದು ಸುಬ್ರಹ್ಮಣ್ಯಕ್ಕೆ ರಥ ಆಗಮಿಸಲಿದೆ ಎಂದು ಅವರು ವಿವರಿಸಿದರು.
ನ.10ರಂದು ಶಾಸ್ತ್ರೋಕ್ತವಾಗಿ ಸಮರ್ಪಣೆ ಮಾಡಲಾಗುತ್ತದೆ. ನ.9 ರಂದು ಸಂಜೆ 6 ರಿಂದ ವಾಸ್ತು ರಕ್ಷೋಘ್ನ ಹೋಮ ಶುದ್ಧಿ ಕಲಶ, ವಾಸ್ತು ಬಲಿ ಮತ್ತು ವಾಸ್ತು ಪೂಜೆ ನಡೆಯಲಿದೆ. ನ.10ರಂದು ಬೆಳಗ್ಗೆ 7ರಿಂದ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಪೂರ್ವಾಹ್ನ ಗಂಟೆ 11ಕ್ಕೆ ಪೂರ್ಣಾಹುತಿಗೊಂಡು, ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು. ಅದೇ ದಿನ ರಾತ್ರಿ 8 ರಂದು ಪ್ರಥಮ ಬೆಳ್ಳಿರಥ ಸೇವೆಯನ್ನು ನೆರವೇರಿಸಲು ನಿಶ್ಚಯಿಸಲಾಗಿದೆ ಎಂದು ಅವರು ವಿವರಿಸಿದರು.
ನ.4ರಂದು ಸುಳ್ಯಕ್ಕೆ ರಥ:
ರಥ ಶಿಲ್ಪಿ ಕೋಟೇಶ್ವರ ಬಿ.ಲಕ್ಷ್ಮೀ ನಾರಾಯಣ ಆಚಾರ್ಯರು ಮತ್ತು ಪುತ್ರ ರಾಜಗೋಪಾಲ ಆಚಾರ್ಯರು ನಿರ್ಮಿಸಿಕೊಟ್ಟ ಬೆಳ್ಳಿರಥಕ್ಕೆ ಗುತ್ತಿಪೂಜೆ ನಡೆದು ಶಾಸ್ತ್ರೋಕ್ತವಾಗಿ ಬಿಟ್ಟುಕೊಡುವ ಕಾರ್ಯಕ್ರಮ ನ.3ರಂದು ರಾತ್ರಿ ನಡೆಯಲಿದೆ. ನ.೪ರಂದು ಬೆಳಗ್ಗೆ 8ಕ್ಕೆ ಬೆಳ್ಳಿರಥ ಯಾತ್ರೆ ಆರಂಭಗೊಳ್ಳಲಿದೆ. ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸಾಯಂಕಾಲ ಸುಳ್ಯಕ್ಕೆ ಆಗಮಿಸಲಿದೆ. ಪೈಚಾರು ಬಳಿ ಪೂರ್ಣಕುಂಭದ ಮೂಲಕ ಸ್ವಾಗತಿಸಲ್ಪಟ್ಟು ಸಿಂಗಾರಿಮೇಳ, ಭಜನಾ ತಂಡ ಹಾಗೂ ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಬರುವುದು. ಬಳಿಕ ಅಮರಶ್ರೀ ಕಾಂತಮಂಗಲದ ಮೂಲಕ ಹಾದು ಹೋಗಿ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯಲ್ಲಿ ರಾತ್ರಿ ತಂಗಲಿದೆ. ನ.೫ರಂದು ಪೂ.೮ಕ್ಕೆ ಶ್ರೀ ಗುತ್ಯಮ್ಮ ಕ್ಷೇತ್ರದಿಂದ ಹೊರಟು ಬೆಳ್ಳಿರಥ ಯಾತ್ರೆ ಕೆವಿಜಿ ಸರ್ಕಲ್ ಬಳಿಯಿಂದ ವೈಭವದ ಮೆರವಣಿಗೆಯೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊರಡಲಿದೆ.
ಬೆಳ್ಳಿರಥ ಯಾತ್ರೆಯ ಸಂದರ್ಭದಲ್ಲಿ ಹಾದು ಹೋಗುವ ವಿವಿಧ ಧಾರ್ಮಿಕ ಕ್ಷೇತ್ರಗಳ ಹಾಗೂ ವಿವಿಧ ಗ್ರಾಮಗಳ ಭಕ್ತರ ಸ್ವಾಗತದೊಂದಿಗೆ ವೈಭವದ ಬೆಳ್ಳಿರಥ ಯಾತ್ರೆ ಮುಂದುವರಿದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ. ರಥ ಸಮರ್ಪಣೆ ಸಂದರ್ಭದಲ್ಲಿ ಮತ್ತು ರಥಯಾತ್ರೆ ಸಂದರ್ಭದಲ್ಲಿ ಭಕ್ತರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಡಾ. ರೇಣುಕಾ ಪ್ರಸಾದ್ ಕೆ.ವಿ. ಎಂದು ಅವರು ವಿನಂತಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸುರೇಶ್ ವಿ, ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕೆವಿಜಿ ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಮಾಧವ ಬಿ.ಟಿ, ಕಮಲಾಕ್ಷ ನಂಗಾರು, ಜಯಂತ ತಳೂರು ಉಪಸ್ಥಿತರಿದ್ದರು.
