ರಾಜ್ಯ ಮುಕ್ತ ಫ್ಲ್ಯಡ್ ರೇಟೆಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್-2025ಗೆ ಚಾಲನೆ
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ನ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ಉದ್ಘಾಟಿಸಿ ಮಾತನಾಡಿ, ಚೆಸ್ ಅಂದರೆ ಕೇವಲ ಆಟವಲ್ಲ ಅದು ಒಂದು ಆಲೋಚನಾ ಶಕ್ತಿಯ ಕಲೆಯಾಗಿದೆ. ಮಹಾಭಾರತದ ಕಾಲದ ಚದುರಂಗ ಆಟವನ್ನು ನಾವು ನೆನಪಿಸಿಕೊಳ್ಳಬಹುದು. ಅಲ್ಲಿ ನಾಣ್ಯಗಳನ್ನು ಉರುಳಿಸುವ ಮೂಲಕ ಆಟ ನಡೆಯುತ್ತಿತ್ತು. ಮೋಸ ದಾಟ ನಡೆಯುವ ಸಾಧ್ಯತೆ ಇತ್ತು ಆದರೆ ಚೆಸ್ ಅಂದರೆ ಸಮ ಬಲದ ಆಟ. ಎರಡೂ ತಂಡಗಳಲ್ಲಿ ಸಮ ಬಲದ ಸೈನ್ಯ. ಕುದುರೆ, ಆನೆ, ಮಂತ್ರಿ ಸೈನಿಕರ ಮೂಲಕ ರಾಜನನ್ನು ಚೆಕ್ ಮೇಟ್ ಮಾಡಿ ಕಟ್ಟಿ ಹಾಕುವ ಅಥವಾ ಬಂಧಿಸುವುದು. ಇಲ್ಲಿ ಶಕ್ತಿ ಪ್ರದರ್ಶನ ಇಲ್ಲ. ಕೇವಲ ಮೈಂಡ್ಗೇಮ್. ಇಲ್ಲಿ ದೈಹಿಕ ಶಕ್ತಿ ಪ್ರದರ್ಶನಕ್ಕೆ ಅವಕಾಶ ಇಲ್ಲ. ಭೌತಿಕ ಬಲ, ಚಿಂತನೆ, ಆಲೋಚನ ಶಕ್ತಿಯಿಂದ ಎದುರಾಳಿಯನ್ನು ಹೆಣೆಯುವ ಕಾರ್ಯ ಕ್ಷಮತೆ. ಇಲ್ಲಿ ಯಾರೂ ಯಾರ ಜತೆಯೂ ಆಡಬಹುದು. ಹತ್ತರ ಬಾಲಕ 80ರ ವೃದ್ಧರೂ ಆಡಬಹುದು. ಹೆಣ್ಣು ಗಂಡೂ ಆಡಬಹುದು ಎಂದು ಹೇಳಿದರು.
ಪಾಶ್ಚಾತ್ಯರೆ ಹೆಚ್ಚು ಪ್ರಧಾನ್ಯತೆ ಹೊಂದಿದ್ದ ಚೆಸ್ಗೆ ಭಾರತದಲ್ಲಿ ಮಾನ್ಯತೆ ಗಳಿಸಿಕೊಟ್ಟವರು ೫ ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್. ಆ ನಂತರದಲ್ಲಿ ಕೊನೆರು ಹಂಪಿ ಮೊದಲಾದವರು, ಗ್ರಾಂಡ್ ಮಾಸ್ಟರ್ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಇತ್ತೇಚಿನ ದಿನಗಳಲ್ಲಿ ಯುವ ಪ್ರತಿಭೆ ಗುಕೇಶ್ರಂತಹ ವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಛಾಪನ್ನು ಮೂಡಿಸಿದರು ಎಂದರು.
ಈ ಸಂದರ್ಭದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಚೆಸ್ ಪಂದ್ಯಾವಳಿಗಳನ್ನು ಸಂಘಟಿಸಿ. ಪ್ರಶಸ್ತಿಯನ್ನು ಗಳಿಸಿದ ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ನ ಸಂಘಟನೆಯನ್ನು ಶ್ಲಾಘಿಸಿದರು.
ದ.ಕ. ಜಿಲ್ಲಾ ಚೆಸ್ ಅಸೋಸಿಯೇಷನ್ನ ಅಧ್ಯಕ್ಷ ಸುನೀಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಚೆಸ್ ಅಧ್ಯಕ್ಷೆ ಡಾ. ಅಮರಶ್ರೀ ಅಮರ್ ನಾಥ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಚೆಸ್ ಅಸೋಸಿಯೇಷನ್ನ ಉಪಾಧ್ಯಕ್ಷ ರಮೇಶ್ ಕೋಟೆ ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ನ ಮಂಜುನಾಥ್ ಆಚಾರ್, ಸಲಹೆಗಾರ ಸಾಕ್ಷಾತ್, ಉಪಾಧ್ಯಕ್ಷ ನಾರಾಯಣ್ ಎಲ್ ಮತ್ತಿತರರರು ಉಪಸ್ಥಿತರಿದ್ದರು.