ಸುಳ್ಯ ದಸರಾ ಉತ್ಸವದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸ
Thursday, October 2, 2025
ಸುಳ್ಯ: ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸುಳ್ಯ ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಾಂಬ ವೇದಿಕೆಯಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಅ.2 ರಂದು ವಿಜಯದಶಮಿ ದಿನದಂದು ಪುಟಾಣಿಗಳಿಗೆ ಅಕ್ಷರಾಭ್ಯಾಸ ನಡೆಯಿತು.
ಬೆಳಗ್ಗೆ 6.41ರಿಂದ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶಾರದಾ ದೇವಿಯ ಮುಂಭಾಗದಲ್ಲಿ ಗುರು ಗಣಪತಿ ಹಾಗೂ ವ್ಯಾಸ ಸರಸ್ವತಿ ಪೂಜೆ ನೆರವೇರಿಸುವುದರ ಮೂಲಕ ಅಕ್ಷರಾಭ್ಯಾಸ ಆರಂಭಿಸಿದರು. ಬಳಿಕ ಮಧ್ಯಾಹ್ನದ ತನಕ ಅಕ್ಷರಾಭ್ಯಾಸ ನಡೆಯಿತು.
ನೂರಕ್ಕೂ ಅಧಿಕ ಮಂದಿ ಪುಟಾಣಿಗಳು ಜ್ಞಾನದ ಮೊದಲ ಅಕ್ಷರ ಬರೆದರು. ಸುದರ್ಶನ ಭಟ್ ಉಜಿರೆ ಹಾಗೂ ಹೇಮಂತ್ ಪಾಂಡೆ ಪೂಜೆಯಲ್ಲಿ ಸಹಕರಿಸಿದರು. ದಸರಾ ಸಮೂಹ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.