ಜನಪ್ರತಿನಿಧಿಗಳ ಆಡಳಿತಾವಧಿ ಮೊಟಕು ನ.5 ರಂದು ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಕೊನೆಯ ಸಾಮಾನ್ಯ ಸಭೆ
ಬಂಟ್ವಾಳ ಪುರಸಭೆಯ ಜನಪ್ರತಿನಿಧಿಗಳ ಹೊರತುಪಡಿಸಿ ರಾಜ್ಯದ ವಿವಿಧ ನಗರ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರು ಹೈಕೋಟ್೯ ಮೊರೆ ಹೋದ ಹಿನ್ನಲೆಯಲ್ಲಿ ಅವಧಿ ಮುಕ್ತಾಯದ ವರೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಆದೇಶ ಹೊರಡಿಸಿ ವಿಚಾರಣೆ ಮುಂದೂಡಿದ್ದು,ಹೈಕೋಟ್೯ನ ಮುಂದಿನ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ.
ಹಾಗಾಗಿ ಬಂಟ್ವಾಳ ಪುರಸಭೆಯ ಐದುವರ್ಷದ ಜನಪ್ರತಿನಿಧಿಗಳ ಆಡಳಿತ ನ.7 ರಂದು ಸಂಪನ್ನಗೊಳ್ಲಕುವುದು ಪಕ್ಕಾ ಆಗಿದ್ದು, ಬಳಿಕ ಅಧಿಕಾರಿಗಳದ್ದೇ ಕಾರುಬಾರು ನಡೆಯಲಿದೆ. ಅಧಿಕಾರಿಗಳು ನಡೆದದ್ದೆ ದಾರಿಯಾಗಲಿದೆ. ಕಳೆದ ಐದು ವರ್ಷದ ಜನಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಕಣ್ಣಿಗೆ ಕಾಣುವ ರೀತಿಯಲ್ಲಾಗಲೀ ಅಥವಾ ಹೇಳಿಕೊಳ್ಳುವಂತ ಯೋಜನೆ, ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂಬುದು ಪುರವಾಸಿಗಳ ಅಭಿಪ್ರಾಯವಾಗಿದೆ.
ಪಾಲನೆಯಾಗದ ನಿರ್ಣಯ:
ಸಾಮಾನ್ಯ ಸಭೆಯಲ್ಲಾಗುವ ನಿರ್ಣಯಗಳು ತಿಂಗಳು ಕಳೆದರೂ ಪುರಸಭೆಯ ಅಧಿಕಾರಿಗಳಿಂದ ಪಾಲನೆಯಾಗುತ್ತಿಲ್ಲ ಎಂಬುದು ಪಕ್ಷಬೇಧ ಮರೆತು ಸದಸ್ಯರಿಂದಲೇ ಪ್ರತಿ ಸಭೆಯಲ್ಲಿ ಕೇಳಿ ಬರುತ್ತಿದ್ದ ಗಂಭೀರ ಆರೋಪ,ಪುರಸಭಾ ವ್ಯಾಪ್ತಿಯಲ್ಲಿ ಅನುದಾನ ಕಾದಿರಿಸಲಾದರೂ ಬಹುಮುಖ್ಯವಾದ ಯೋಜನೆಯಲ್ಲೊಂದಾಗೊರುವ ನೆನೆಗುದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ಯೋಜನೆ ಇನ್ನು ಕೂಡ ಕಾರ್ಯರೂಪಕ್ಕೆ ಬಂದಿಲ್ಲ, ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಮಸ್ಯೆ ಹಲವು ಸುತ್ತಿನ ಸಭೆ, ಚರ್ಚೆಯ ಬಳಿಕವು ಇನ್ನು ಬಗೆಹರಿದಿಲ್ಲ, ನೇತ್ರಾವತಿ ನದಿಗೆ ತ್ಯಾಜ್ಯ, ಕೊಳಚೆ ನೀರು ನೇರವಾಗಿ ಹರಿಯುವ ಗಂಭೀರ ಸಮಸ್ಯೆಗೂ ತಾರ್ಕಿಕ ಅಂತ್ಯ ಕಾಣಲಿಲ್ಲ ಹೀಗೆ ಹತ್ತು ಹಲವು ವಿಚಾರಗಳು ಹಾಗೆ ಉಳಿದಿದೆ.
27 ಸದಸ್ಯ ಬಲ:
ಒಟ್ಟು 27 ಸದಸ್ಯ ಬಲ ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ 12 ಕಾಂಗ್ರೆಸ್,11 ಬಿಜೆಪಿ, 4 ಎಸ್ ಡಿಪಿಐ ಸದಸ್ಯರಿದ್ದರು.ಈಪೈಕಿ ಕಾಂಗ್ರೆಸ್ ಸದಸ್ಯ ಜನಾರ್ದನ ಚಂಡ್ತಿಮಾರ್ ಅವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನ ರಾಗಿದ್ದು,ಅವರ ಸ್ಥಾನ ಖಾಲಿ ಉಳಿದಿತ್ತು. ಎಸ್ಡಿಪಿಐ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಆಧಿಕಾರದ ಚುಕ್ಕಾಣಿ ಹಿಡಿದಿತ್ತು.
ಮೊದಲ ಎರಡೂವರೆ ವರ್ಷ ಕಾಂಗ್ರೆಸ್ನ ಶರೀಫ್ ಹಾಗೂ ಜೋಸ್ಪಿನ್ ಡಿಸೋಜ ಕ್ರಮವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಪೂರ್ತಿ ಆಡಳಿತ ನಡೆಸಿದರೆ. ಎರಡನೇ ಅವಧಿಯಲ್ಲಿ ಕಾಂಗ್ರೆಸ್ನ ವಾಸುಪೂಜಾರಿ ಲೊರೆಟ್ಟೋ ಅವರು ಅಧ್ಯಕ್ಷರಾಗಿ, ಎಸ್ಡಿಪಿಐನ ಮೋನಿಶ್ ಆಲಿ ಉಪಾಧ್ಯಕ್ಷರಾಗಿದ್ದರು. ಇವರಿಗೆ ಪೂರ್ತಿ ಎರಡೂವರೆ ವರ್ಷ ಆಡಳಿತಾವಧಿ ಸಿಗದೆ ಒಂದುವರ್ಷ ನಾಲ್ಕು ತಿಂಗಳ ಅವಧಿ ಮೊಟಕುಗೊಂಡಿದೆ.
ಇದೇ ಮೊದಲಿಗೆ ಹಾಲಿ ಅಧ್ಯಕ್ಷ-ಉಪಾಧ್ಯಕ್ಷರ ಪೂರ್ತಿ ಅಧಿಕಾರದವಧಿ ಮೊಟಕುಗೊಂಡು ಕುರ್ಚಿ ಬಿಡಬೇಕಾದ ಸನ್ನಿವೇಶಕ್ಕೆ ಸಿಲುಕಿದ ದಾಖಲೆಬರೆದಿದ್ದಾರೆ.
ನ.5 ರಂದು ನಡೆಯುವ ಬಂಟ್ವಾಳ ಪುರಸಭೆಯ ಜನಪ್ರತಿನಿಧಿಗಳ ಆಡಳಿತದ ಕೊನೆ ಸಭೆ ಅತ್ಯಂತ ಮಹತ್ವ ಮತ್ತು ವಿಶೇಷವಾಗಿದ್ದು,ಸದಸ್ಯರು ತಮ್ಮ ಆಡಳಿತಾವಧಿಯ ಕೊನೆದಿನದಂದು ಐದುವರ್ಷಗಳ ಕಾಲ ಸಹಕರಿಸಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.
ಇನ್ನು ಖಾಯಂ ಮುಖ್ಯಾಧಿಕಾರಿಯಿಲ್ಲ:
ಮುಖ್ಯಾಧಿಕಾರಿಯಾಗಿದ್ದಲೀನಾ ಬ್ರಿಟ್ಟೋ ಅವರು ವರ್ಗಾವಣೆಯಾದ ಬಳಿಕ ಕಳೆದ ಒಂಭತ್ತು ತಿಂಗಳಲ್ಲಿ ಮೂವರು ಮುಖ್ಯಾಧಿಕಾರಿಯವರನ್ನು ಬಂಟ್ವಾಳ ಪುರಸಭೆ ಕಂಡಿದೆ.
ಬಂಟ್ವಾಳ ಪುರಸಭೆಗೆ ಇನ್ನುಖಾಯಂ ಮುಖ್ಯಾಧಿಕಾರಿ ಹುದ್ದೆ ಭರ್ತಿಯಾಗಿಲ್ಲ,ಈಗ ಸೋಮೇಶ್ವರಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರು ಪ್ರಭಾರ ನೆಲೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಚನೆಯಾಗದ ಸ್ಥಾಯಿ ಸಮಿತಿ:
ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅದೇನು ಗ್ರಹಚಾರ ತಟ್ಟಿದೆಯೋ ಕಳೆದ ಹತ್ತು ವರ್ಷದ ಆಡಳಿತಾವಧಿಯಲ್ಲಿ ರಾಮಕೃಷ್ಣ ಆಳ್ವ ಅವರು ಪುರಸಭಾಧ್ಯಕ್ಷರಾಗಿದ್ದಾಗ ಹಾಲಿ ಅಧ್ಯಕ್ಷ ವಾಸುಪೂಜಾರಿ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಹೊರತು ಪಡಿಸಿದರೆ ವಸಂತಿ ಚಂಡ್ತಿಮಾರ್ ಅಧ್ಯಕ್ಷರಾಗಿ ಎರಡೂವರೆ ವರ್ಷ ಮತ್ತು ಪ್ರಸ್ತುತ ಐದು ವರ್ಷದ ಆಡಳಿತಾವಧಿಯಲ್ಲಿ ಸ್ಥಾಯಿ ಸಮಿತಿಯೇ ರಚನೆಯಾಗದಿರುವುದು ಬಂಟ್ವಾಳ ಪುರಸಭೆಯಲ್ಲೊಂದು ಹೊಸ ಇತಿಹಾಸ.
ನಿಯಮ ಏನುಹೇಳುತ್ತದೆ
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 16(1-ಎ)ರಂತೆ ’ಸಾರ್ವತ್ರಿಕ ಚುನಾವಣೆಯಲ್ಲಿ ಚುನಾಯಿತನಾದ ಅಥವಾ ನಾಮನಿರ್ದೇಶಿತನಾದ ಕೌನ್ಸಿಲರ್ನ ಪದಾವಧಿಯು ಮುನಿಸಿಪಲ್ ಕೌನ್ಸಿಲಿನ ಮೊದಲ ಸಭೆಗಾಗಿ ನೇಮಕ ಮಾಡಲಾದ ದಿನಾಂಕದಂದು ಆರಂಭವಾಗುತ್ತದೆ.
ಅದರಂತೆ ಬಂಟ್ವಾಳ ಪುರಸಭೆಯ ಪ್ರಥಮ ಸಭೆಯು 2020 ನ.7 ರಂದು ನಡೆದಿದೆ, ಹಾಗಾಗಿ ಬಂಟ್ವಾಳ ಪುರಸಭೆಯ ಚುನಾಯಿತ ಸದಸ್ಯರ ಪದಾವಧಿಯು 2025 ರ ನ.7 ರಂದು (5 ವರ್ಷ) ಮುಕ್ತಾಯಗೊಳ್ಳುತ್ತದೆ. ಈ ಸಂದರ್ಭದಲ್ಲಿ ೨ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದ ದಿನಾಂಕವನ್ನು ಕೌನ್ಸಿಲರನ ಪದಾವಧಿಗಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ನಗರಾಡಳಿತ ಸಂಸ್ಥೆಗಳಿಗೆ ಸರಕಾರ ಚುನಾವಣೆ ನಡೆಸುತ್ತದೆಯೋ ಅಥವಾ ಸರಕಾರದ ಛೀಮಾರಿಯ ನಡುವೆ ಜಿ.ಪಂ., ತಾ.ಪಂ. ಮೂರುವರೆ ವರ್ಷದಿಂದ ಚುನಾವಣೆ ನಡೆಸದೆ ಖಾಲಿ ಬಿಟ್ಟು ಅಧಿಕಾರಿಗಳ ಮರ್ಜಿಗೆಅಧಿಕಾರ ಬಿಡುತ್ತದೆಯೋ!.