ಶಾಲೆಗಳಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಪ್ರದರ್ಶನ
Sunday, November 2, 2025
ಕುಂದಾಪುರ: ಸರಕಾರಿ ವ್ಯವಸ್ಥೆಯ ವಸತಿ ನೆಲೆಯಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಕ್ಷಗಾನದ ಮೂಲ ಸ್ವರೂಪವನ್ನು ಬಿತ್ತರಿಸುವ ಕಾರ್ಯ ವಿಶಿಷ್ಟವಾದದ್ದು. ದಿನವಿಡೀ ಓದು ಹಾಗೂ ಇನ್ನಿತರ ಚಟುವಟಿಕೆಯಲ್ಲಿ ನಿರತರಾದ ಮಕ್ಕಳಿಗೆ ಮಕ್ಕಳಿಂದಲೇ ಯಕ್ಷಗಾನದ ಪರಂಪರೆಯನ್ನು ತಿಳಿಸುವ ಪ್ರಯತ್ನ ಯಶಸ್ಸು ಪಡೆಯುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶೈಲಾ ಎಮ್. ಶೇಟ್ ಹೇಳಿದರು.
ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದವು ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಯಕ್ಷಗಾನದ ಕಾರ್ಯಕ್ರಮವನ್ನು ದೀವಟಿಕೆ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಉಪನ್ಯಾಸಕ ಶಂಕರಣರಾಯಣ ಉಪಾಧ್ಯ ಮಾತನಾಡಿ, ರಂಗದಲ್ಲಿ ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ, ಕಿರಾತನ ಒಡ್ಡೋಲಗವನ್ನು ಬಳಸಿಕೊಂಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಬಗೆಯನ್ನು ಯಶಸ್ವೀ ಕಲಾವೃಂದ ಮಾಡುತ್ತಿದೆ. ಈ ಶಾಸ್ತ್ರೀಯ ಕಲೆಯನ್ನು ಕಲಿತ ಮಕ್ಕಳು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗುತ್ತದೆ. ಇಂತಹ ಹಲವು ಪ್ರಕಾರವನ್ನು ಉಳಿಸುವ ಕಾರ್ಯದಲ್ಲಿ ನಿರಂತರತೆಯನ್ನು ಸಾಧಿಸಿದೆ ಎಂದರು.
ಯಲ್ಲಾಪುರದ ಗಣಪತಿ ಭಟ್, ಸುಬ್ರಹ್ಮಣ್ಯ ವೈದ್ಯ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವಿದ್ಯಾರ್ಥಿ ಹರೀಶ್ ಕಾವಡಿ ರಂಗ ನಿರ್ದೇಶಕ ಶ್ರೀಶ ಭಟ್ ತೆಕ್ಕಟ್ಟೆ ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದದ ಮಕ್ಕಳಿಂದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ರಂಗಪ್ರಸ್ತುತಿಗೊಂಡಿತು.