'ಡಿಜಿಟಲ್ ಅರೆಸ್ಟ್’ ವಿರುದ್ಧ ಜಾಗೃತಿ
ಮಂಗಳೂರು: ದೇಶಾದ್ಯಂತ ಡಿಜಿಟಲ್ ಪಾವತಿಗಳು ಹೆಚ್ಚುತ್ತಿರುವ ನಡುವೆಯೇ ’ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಗಳು ಕೂಡಾ ಅಧಿಕವಾಗಿ ವರದಿಯಾಗುತ್ತಿವೆ. ಆನ್ಲೈನ್ ವಂಚನೆಗಳ ವಿರುದ್ಧ ಗ್ರಾಹಕರು ಹೆಚ್ಚು ಜಾಗೃತಿ ವಹಿಸಬೇಕು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಕರೆ ನೀಡಿದೆ.
ಸಂಭವನೀಯ ವಂಚನೆಗಳನ್ನು ಆರಂಭಿಕವಾಗಿ ಗುರುತಿಸುವ ಮೂಲಕ ಇಂಥ ಪ್ರಯತ್ನಗಳನ್ನು ವಿಫಲಗೊಳಿಸಿ, ಸುರಕ್ಷಿತ ಹಾಗೂ ಕಡಿಮೆ ನಗದು ಬಳಕೆಯ ಆರ್ಥಿಕತೆಯನ್ನು ಉತ್ತೇಜಿಸಬಹುದು ಎಂದು ಸಲಹೆ ಮಾಡಿದೆ.
ಕಾನೂನು ಅಧಿಕಾರಿಗಳ ಸೋಗಿನಲ್ಲಿ ನಾಗರಿಕರಿಂದ ಹಣವನ್ನು ಕಸಿಯಲು ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ತಂತ್ರಗಳನ್ನು ಹೂಡುತ್ತಾರೆ. ಬಾಧ್ಯತೆಗೊಳಗಾದ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರ ಮೇಲೆ ನಕಲಿ ಕಾನೂನು ಪ್ರಕರಣಗಳನ್ನು ಸೃಷ್ಟಿಸಿ, ಫೋನ್ ಕರೆಗಳ ಮೂಲಕ ಸಂಪರ್ಕ ಆರಂಭಿಸುತ್ತಾರೆ ಮತ್ತು ನಂತರ ವಿಡಿಯೋ ಕರೆಗಳಿಗೆ ವರ್ಗಾಯಿಸುತ್ತಾರೆ. ಹಣಕಾಸು ಕಾನೂನು ಉಲ್ಲಂಘನೆ ಅಥವಾ ಇತರೆ ಕಾನೂನು ಉಲ್ಲಂಘನೆಗಳಿಗೆ ಸಂಬಂಧಿಸಿದ ಡಿಜಿಟಲ್ ಅರೆಸ್ಟ್ ವಾರಂಟ್ನಿಂದ ಭಯಪಡಿಸುತ್ತಾರೆ ಎಂದು ವಿವರಿಸಿದೆ.
ಪೊಲೀಸ್, ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳು ಅಥವಾ ಕಸ್ಟಮ್ಸ್ ಏಜೆಂಟ್ಗಳಂತೆ ಬಿಂಬಿಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಕೇಳಬಹುದು ಅಥವಾ ದೊಡ್ಡ ಮೊತ್ತದ ಹಣವನ್ನು ಕೇಳಬಹುದು, ಇದು ನೀವು ಆರೋಪಿತ ಅಪರಾಧದಲ್ಲಿ ಭಾಗಿಯಾಗಿಲ್ಲವೆಂದು "ಸ್ಪಷ್ಟಪಡಿಸಲು" ಎಂದು ಭರವಸೆ ನೀಡುತ್ತಾರೆ.
ಅನುಮಾನಾಸ್ಪದ ಸಂಖ್ಯೆಗಳ ಬಗ್ಗೆ ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್ಲೈನ್ 1930 ಗೆ ಕರೆ ಮಾಡಿ ಅಥವಾ ದೂರಸಂಪರ್ಕ ಇಲಾಖೆ (https://sancharsaathi.gov.in/sfc/) ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಹೇಳಿದೆ.