ಯಾವುದನ್ನಾದರೂ ಅಧ್ಯಯನ ಮಾಡುವ ಸ್ವಾತಂತ್ರ್ಯ ಸಾಹಿತ್ಯಕ್ಕಿದೆ: ಅರ್ಜುನ್ ಪಿ.
ನಗರದ ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್ ವಿಭಾಗ, ಭಾಷಾ ಸಂಘ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ಶಿವರಾಮ ಕಾರಂತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಅಧ್ಯಯನದ ಭವಿಷ್ಯ: ಕೌಶಲ್ಯಗಳು, ಅವಕಾಶಗಳು ಮತ್ತು ಜಾಗತಿಕ ವೃತ್ತಿಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಧುನಿಕ ಜಗತ್ತಿನಲ್ಲಿ ಕೌಶಲ್ಯಗಳು ಮುಖ್ಯ. ಕಳೆದ 15 ವರ್ಷಗಳಲ್ಲಿ ಪಠ್ಯದ ಪರಿಕಲ್ಪನೆ ಬದಲಾಗಿದೆ. ಪಠ್ಯ ಯಾವುದೇ ಆಗಿರಬಹುದು. ಇದು ಸ್ವಾವಲಂಬಿಯಾಗಿರುವ ಕಲೆ, ಇತರರ ಜ್ಞಾನವನ್ನು ಅವಲಂಬಿಸಬೇಕಾಗಿಲ್ಲ. ವಿಜ್ಞಾನ ಹೊಂದಿರದ ಮಾನವೀಯತೆ ಹೊಂದಿರುವ ಏಕೈಕ ಅಧ್ಯಯನ ಕ್ಷೇತ್ರ ಇದಾಗಿದೆ. ಸಮಾಜದಲ್ಲಿರುವ ಮಾನವೀಯತೆ ಮತ್ತು ವಿಜ್ಞಾನದ ನಡುವೆ ಇರುವ ಅಂತರವನ್ನು ತುಂಬುವ ಸಾಮರ್ಥ್ಯ ಸಾಹಿತ್ಯ ವಿದ್ಯಾರ್ಥಿಗಳಿಗೆ ಮಾತ್ರವೇ ಇದೆ ಎಂದರು.
ತಾಂತ್ರಿಕ ಪ್ರಗತಿಯ ಯುಗದಲ್ಲಿ ಸಾಹಿತ್ಯ ಕಲಿಕೆಯನ್ನು ಸಾಂಪ್ರದಾಯಿಕ ವಿಧಾನಕ್ಕೆ ಮಾತ್ರವೇ ಅಂಟಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೆಲ ತಾಂತ್ರಿಕ ಭಾಷೆಗಳ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಮುಂದುವರಿದ ತಂತ್ರಜ್ಞಾನಗಳು ಹಾಗೂ ಆಧುನಿಕ ಜಗತ್ತಿನ ಅಗತ್ಯಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಇಂದಿನ ಆಧುನಿಕ ಯುಗದಲ್ಲಿ ಕೌಶಲ್ಯಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಸುಲಭವಾಗಿ ಸಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಂಗ್ಲ ವಿಭಾಗದ ಮುಖ್ಯಸ್ಥೆ ಪ್ರೊ. ಸುಭಾಷಿಣಿ ಶ್ರೀವತ್ಸ, ಭಾಷಾ ಸಂಘದ ಸಂಯೋಜಕಿ ಪ್ರೊ. ನಾಗರತ್ನ ಎನ್. ರಾವ್, ಸೇರಿದಂತೆ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.